ನಿಗಧಿತ ಅವಧಿಯಲ್ಲಿ ಪಾಲಿಕೆ ಕಾಮಗಾರಿ ಪೂರೈಸುವಂತೆ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಸೂಚನೆ

2:37 PM, Thursday, May 16th, 2013
Share
1 Star2 Stars3 Stars4 Stars5 Stars
(No Ratings Yet)
Loading...

N.Prakashಮಂಗಳೂರು : ಮಳೆಗಾಲ ಪ್ರಾರಂಭವಾಗುವುದಕ್ಕು ಮುನ್ನ ನಗರದ ಚರಂಡಿಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು ಮೇ 25 ರೊಳಗೆ ಪೂರ್ಣಗೊಳಿಸಬೇಕೆಂದು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಹಾಗು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಿಳಿಸಿದರು. ಅವರು ಬುಧವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾದ ಅಭಿವೃದ್ಧಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಪಾಲಿಕೆ ಮುಖ್ಯ ಅಧೀಕ್ಷಕ ಎಂಜಿನಿಯರ್ ಬಿ.ಎಸ್.ಬಾಲಕೃಷ್ಣ ಮಾತನಾಡಿ, ನೆರೆ ಪೀಡಿತ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದ್ದು, 10 ತಂಡಗಳ ಟಾಸ್ಕ್ಫೋರ್ಸ್‌ ರಚಿಸಲಾಗಿದೆ. ಇನ್ನುಳಿದಂತೆ  ಪಾಲಿಕೆಯಲ್ಲಿ ಈಗಾಗಲೇ 71 ಲಕ್ಷ ರೂಪಾಯಿ ವೆಚ್ಚದಲ್ಲಿ ಬೃಹತ್‌ ಚರಂಡಿಗಳನ್ನು ಸ್ವಚ್ಚಗೊಳಿಸಲಾಗಿದೆ, ಮಳೆಗಾಲದಲ್ಲಿ ಐದು ವಾರ್ಡ್‌ಗೆ ಒಂದು ತಂಡ, ರಾತ್ರಿಗೆ ಹೆಚ್ಚುವರಿ 3 ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಈ ತಂಡ 24 ಗಂಟೆಯೂ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು,  ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಈ ತಂಡಗಳ ನೇತೃತ್ವ  ವಹಿಸಲಿದ್ದಾರೆ ಎಂದರು. ಪಾಲಿಕೆಗೆ ಪ್ರಥಮ ಹಂತದಲ್ಲಿ ಬಿಡುಗಡೆಯಾದ 100 ಕೋಟಿ ರೂಪಾಯಿಗಳಲ್ಲಿ 12 ಕಾಮಗಾರಿ ಬಾಕಿ ಉಳಿದಿವೆ.  ದ್ವಿತೀಯ ಹಂತದ ನೂರು ಕೋಟಿ ರೂಪಾಯಿ ಪಾಲಿಕೆ ಕಾಮಗಾರಿಯಲ್ಲಿ 15.4 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, 42 ಕಾಮಗಾರಿ ಬಾಕಿ ಉಳಿದಿದೆ, ನಿರ್ಮಿತಿ ಕೇಂದ್ರಕ್ಕೆ ಫುಟ್‌ಪಾತ್‌ ಹಾಗೂ ಚರಂಡಿ ಕಾಮಗಾರಿ ನಿರ್ವಹಿಸಲು ವಹಿಸಲಾಗಿದೆ ಎಂದರು.

N.Prakash ಕಳೆದ ಮೂರು ತಿಂಗಳಿಂದ ಚುನಾವಣಾ ಕಾರಣ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಚುನಾವಣಾ ಕೆಲಸದಂತೆಯೇ ಪರಿಗಣಿಸಿ ಕ್ಷಿಪ್ರಗತಿಯಲ್ಲಿ ಸಂಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ ಹೇಳಿದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದ ಹಾಗೂ ಅತ್ಯಂತ ನಿಧಾನವಾಗಿ ಕಾಮಗಾರಿ ನಡೆಸುವ ಗುತ್ತಿಗೆದಾರರ ಟೆಂಡರ್‌ನ್ನು ರದ್ದುಗೊಳಿಸಲಾಗುವುದು. ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿದ ಜಿಲ್ಲಾಧಿಕಾರಿ, ಎಂಜಿನಿಯರ್‌ಗಳು ಕಾಮಗಾರಿ ಅನುಷ್ಠಾನದಲ್ಲಿ ಉದಾಸೀನತೆ ತೋರಿದರೆ ಕಠಿನ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ| ಹರೀಶ್‌ ಕುಮಾರ್‌, ಪಾಲಿಕೆ ಎಂಜಿನಿಯರ್‌ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English