[1]ನವ ದೆಹಲಿ: ಪ್ರತಿಷ್ಠಿತ ದೆಹಲಿ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಮೂಲತಃ ಸುಳ್ಯದ ಕಳಂಜದವರಾದ ವಸಂತ ಶೆಟ್ಟಿ ರಿಯಾಣದಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಸುಳ್ಯ ತಾಲೂಕಿನ ಎರಡನೆಯವರಾಗಿದ್ದಾರೆ. ಈ ಮೊದಲು ಡಾ.ಪುರುಷೋತ್ತಮ ಬಿಳಿಮಲೆ ಕೂಡಾ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ಈ ಬಾರಿಯದದೆಹಲಿ ಕರ್ನಾಟಕ ಸಂಘದ ಚುನಾವಣೆಯಲ್ಲಿ ಒಟ್ಟಾರೆ 15 ಜನರುಗಳ ಎರಡು ತಂಡಗಳು ಹಾಗೂ ಓರ್ವರು ಸ್ವತಂತ್ರ ಅಭ್ಯರ್ಥಿಯಾಗಿ ಒಟ್ಟು 31 ಜನ ಸ್ಪರ್ಧಿಸಿದ್ದರು.
ಸೌಹಾರ್ದಯುತವಾಗಿ ನಡೆದ ಚುನಾವಣೆಯ ಫಲಿತಾಂಶ ಈ ಕೆಳಗಿನಂತಿದೆ.
ಅಧ್ಯಕ್ಷ : ವಸಂತ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷರುಗಳು: ಬಸವರಾಜು ಬಿ.ಕೆ. ಶ್ರೀಮತಿ ಆಶಾಲತಾ ಎಂ, ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ, ಸಹ ಕಾರ್ಯದರ್ಶಿಗಳು: ಟಿ.ಎಂ.ಮೈಲಾರಪ್ಪ, ಶ್ರೀಮತಿ ಎಸ್.ಸಿ.ಹೇಮಲತ, ಖಜಾಂಚಿ : ಡಾ.ಅವನೀಂದ್ರನಾಥ್ ರಾವ್ ವೈ.
ಸದಸ್ಯರುಗಳು: ಆಂಜನೀ ಗೌಡ, ರಾಧಾಕೃಷ್ಣ, ಶ್ರೀಮತಿ ಪೂರ್ಣಿಮಾ ಗೌಡ, ಬಿರಾದಾರ ವಿ ವಿ, ಶ್ರೀನಿವಾಸ ಪಿ ಸಿ, ಆನಂದ್ ಈಶ್ವರಪ್ಪ ಮುರಗೋಡ, ಶ್ರೀಮತಿ ಆಶಾ ಶ್ಯಾಮ್ ಸುಂದರ್, ಬಸವರಾಜ ಮೇಟಿ.
ಚುನಾಯಿತರಾದ ಹೊಸ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರು ಮೂಲತ: ಸುಳ್ಯದವರು. ಫರಿದಾಬಾಧಿನ ಸೆಂಚುರಿಕ್ರೇನ್ ಇಂಜಿನಿಯರ್ಸ್ ಕಂಪೆನಿಯ ಉಪಾಧ್ಯಕ್ಷ ಬೆಳ್ಳಾರೆಯವರು ದೆಹಲಿ ಕರ್ನಾಟಕ ಸಂಘದ ಸಹ ಕಾರ್ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2004-06ರಲ್ಲಿ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮತ್ತು ಸಾಂಸ್ಕೃತಿಯ ಸಮಿತಿಯ ಅಧ್ಯಕ್ಷರಾಗಿ ಸಂಘದ ನೂತನ ಸಾಂಸ್ಕೃತಿಕ ಸಮುಚ್ಛಯ ಉದ್ಘಾಟನಾ ಸಂದರ್ಭದಲ್ಲಿ 15 ದಿನಗಳ ಅಭೂತಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗಿಸಿದ್ದು ಒಂದು ದಾಖಲೆ. ಉತ್ತಮ ಸಂಘಟನಾ ಶಕ್ತಿಯಿರುವ ಇವರು ಬರಹಗಾರರೂ ಕೂಡ. ‘ಅಂತರ್ಗತ’ ಕಿರುಕಾದಂಬರಿ, ‘ಅಕಾಲ’ ಕಥಾ ಸಂಕಲನ ಹಾಗೂ ‘ಅಧ್ಯಾಯ’ ಕವನ ಸಂಕಲನ ಪ್ರಕಟಿಸಿದ್ದಾರೆ. ಶ್ರೀ ಕೃಷ್ಣಮೂರ್ತಿ ಕಲುಮಂಗಿಯವರ ‘ಆಶಾಸೌಧ’ ಶ್ರೀ ಐ.ರಾಮಮೋಹನ್ ರಾವ್ ಅವರ ಕುರಿತು ‘ಅದಮ್ಯ’ ಯಕ್ಷಗಾನದ ಮೇರು ಕಲಾವಿದ ಅಳಿಕೆ ರಾಮಯ್ಯ ರೈ ಕುರಿತು ‘ಅಳಿಕೆ’ ಕೃತಿಗಳನ್ನು ತಮ್ಮ ‘ದೆಹಲಿ ಮಿತ್ರ’ ಪ್ರಕಾಶನದಿಂದ ಪ್ರಕಟಪಡಿಸಿ ಲೋಕಾರ್ಪಣೆ ಕಾರ್ಯಕ್ರಮ ಕೂಡ ಸಂಘಟಿಸಿದ್ದಾರೆ.
ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರೂ ಆಗಿದ್ದರು. ಕಳೆದ ಫೆಬ್ರವರಿಯಲ್ಲಿ ‘ದೆಹಲಿ ತುಳು ಸಿರಿ’ ಜಾಗತಿಕ ಸಮಾವೇಶದ ಸಂಚಾಲಕರಾಗಿ ಅತ್ಯಂತ ಯಶಸ್ವಿ ಸಮಾವೇಶವನ್ನು ಸಂಘಟಿಸಿದ ಬೆಳ್ಳಾರೆಯವರು ಓರ್ವ ದಕ್ಷ ಸಂಘಟಕ ಎಂಬುದನ್ನು ದೆಹಲಿಯ ಜನರಿಗೆ ವಿಧಿತಗೊಳಿಸಿದರು.