ಮಂಗಳೂರು : ‘ನೈನ್ ಓ ಕ್ಲಾಕ್’ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ‘ಜುಗಾರಿ’ ತುಳು ಚಲನಚಿತ್ರದ ಮುಹೂರ್ತ ಸಮಾರಂಭ ಗುರುವಾರ ಶ್ರೀ ಭಗವತೀ ದೇವಸ್ಥಾನದ ಬಳಿಯ ಪಿ.ವಿ.ಎಸ್. ಕಲಾಕುಂಜದಲ್ಲಿ ಜರಗಿತು.
ಕನ್ನಡ ಚಿತ್ರರಂಗದ ನಟಿ ರಾಗಿಣಿ ದ್ವಿವೇದಿ ಆರಂಭದ ಫಲಕ ತೋರಿಸುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಶಾಂಭವಿ ಮುಹೂರ್ತ ಕಾರ್ಯಕ್ರಮ ಉದ್ಘಾಟಿಸಿದರು.
‘ಕುಡ್ಲದ ಜನಕುಲೆಗ್ ಎನ್ನ ಸೊಲ್ಮೆಲು’ ಎಂದು ಮಾತು ಪ್ರಾರಂಭಿಸಿದ ರಾಗಿಣಿ ದ್ವಿವೇದಿ, ತುಳು ಚಿತ್ರರಂಗದದಲ್ಲಾಗುತ್ತಿರುವ ಅಭಿವೃದ್ಧಿ, ಬೆಳೆಯುತ್ತಿರುವ ಪರಿ ಕೇಳಿ ಬಹಳಷ್ಟು ಸಂತೋಷವಾಗಿದೆ. ಇಲ್ಲಿನ ಸಾಕಷ್ಟು ನೂತನ ಪ್ರತಿಭೆಗಳು ಸಿನೆಮಾ ಇಂಡಸ್ಟ್ರಿಗೆ ಪಾದಾರ್ಪಣೆಗೈಯುತ್ತಿರುವುದು ಅಭಿನಂದನಾರ್ಹ. ಉತ್ತಮ ಸಂದೇಶದೊಂದಿಗೆ ನೂತನವಾಗಿ ನಿರ್ಮಾಣವಾಗುತ್ತಿರುವ “ಜುಗಾರಿ’ ಚಿತ್ರ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ಚಿತ್ರ ನಿರ್ದೇಶಕ ಆನಂದ್ ಪಿ. ರಾಜು ಮಾತನಾಡಿ, ಕನ್ನಡದಲ್ಲಿ ನಾನು ಸಾಕಷ್ಟು ಚಿತ್ರಕ್ಕೆ ನಿರ್ದೇಶನ ಮಾಡಿದ್ದೇನೆ. ‘ಜುಗಾರಿ’ಯಿಂದ ದೂರವಿರಿ ಎಂದು ಸಂದೇಶ ನೀಡುವ ಈ ತುಳು ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದೇನೆ. ಜನರ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದರು.
ಚಿತ್ರದ ನಾಯಕ ನಟ ಕಾರ್ತಿಕ್ ಬಂಜನ್ ಮಾತನಾಡಿ, ನಾನು ಈ ಹಿಂದೆ ನಟಿಸಿದ ರಿಕ್ಷಾ ಡ್ರೈವರ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆಕಿದೆ. ಪ್ರಸ್ತುತ ಹೊಸ ಚಿತ್ರಕ್ಕೂ ಪ್ರೋತ್ಸಾಹದೊಂದಿಗೆ ಯಶಸ್ಸು ದೊರೆಯುವಂತೆ ಎಲ್ಲ ಜನರು ಅಶೀರ್ವದಿಸಬೇಕು ಎಂದರು.ನಟಿ ಎಸ್ತೇರ್ ನೊರೊನ್ಹ , “ಎಕ್ಕ ಸಕ’ ಚಿತ್ರದ ನಿರ್ಮಾಪಕ ಕಿಶೋರ್ ಡಿ. ಶೆಟ್ಟಿ, ಕುಲಾಲ ಯುವ ವೇದಿಕೆ ಅಧ್ಯಕ್ಷ ತೇಜಸ್ವಿರಾಜ್, “ಸೂಂಬೆ’ ಚಿತ್ರ ನಿರ್ದೇಶಕ ಸಾಯಿಕೃಷ್ಣ, “ರಂಗ್’ ಚಿತ್ರ ನಿರ್ಮಾಪಕ ದೇವದಾಸ್ ಪಾಂಡೇಶ್ವರ್, ಚಿತ್ರ ನಟ ಅಮಿತ್ ರಾವ್, ಮಾಜಿ ಸಚಿವ ಅಮರನಾಥ್ ಶೆಟ್ಟಿ ಚಿತ್ರಕ್ಕೆ ಶುಭ ಹಾರೈಸಿದರು.
“ಜುಗಾರಿ’ ಚಿತ್ರದ ನಿರ್ಮಾಪಕರಾದ ಪಮ್ಮಿ ಕೊಡಿಯಾಲ್ಬೈಲ್ ಹಾಗೂ ಆರ್. ಧನ್ರಾಜ್, ಪ್ರಮುಖರಾದ ಸೂರಜ್ ಶೆಟ್ಟಿ, ರಾಜಗೋಪಾಲ ರೈ, ಗಂಗಾಧರ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಸದಾಶಿವ ದಾಸ್ ಪಾಂಡೇಶ್ವರ, ನವೀನ್ ಚಂದ್ರ, ಡಿ.ಕೆ. ಅಶೋಕ್ ಹಾಗೂ ಎನ್ನಾರ್ ಕೆ. ವಿಶ್ವನಾಥ, ರಾಧಾಕೃಷ್ಣ ಶೆಟ್ಟಿ, ಸುನೀತಾ, ಗಿರೀಶ್ ಶೆಟ್ಟಿ, ನಿರ್ಮಾಣ ಮೇಲ್ವಿಚಾರಕರಾದ ಚೇತನ್ ಬರ್ಕೆ, ಗೋಪಾಲ ಗಟ್ಟಿ, ನಟ ಚೇತನ್ ರೈ ಮಾಣಿ ಮೊದಲಾದವರು ಉಪಸ್ಥಿತರಿದ್ದರು.
ಹಿಂದಿ, ತೆಲುಗು ಚಿತ್ರದಲ್ಲಿ ನಟಿಸಿರುವ ಎಸ್ತೇರ್ ನೊರೊನ್ಹಾ “ಜುಗಾರಿ’ ಚಿತ್ರದ ನಾಯಕಿ. ಅಮಿತ್ ರಾವ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಶೋಭರಾಜ್, ಸಂತೋಷ್ ಶೆಟ್ಟಿ, ಗೋಪಿನಾಥ್ ಭಟ್, ಸತೀಶ್ ಬಂದಲೆ, ಚೇತನ್ ರೈ ಮಾಣಿ, ಸಾಜನ್ ಶೆಟ್ಟಿ, ಶೋಭಾ ರೈ, ಅಲೀಷಾ ಮೊದಲಾದವರು ತಾರಾಗಣದಲ್ಲಿದ್ದಾರೆ.
ಅಕ್ಟೋಬರ್ನಲ್ಲಿ ಬಿಡುಗಡೆಯಾಗುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶಕರಾಗಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ ಮಾಡಲಿದ್ದು, ಶಿವರಾಜ್ ಮೇಹು ಸಂಕಲನ, ಕೌರವ ವೆಂಕಟೇಶ್ ಅವರ ಸಾಹಸ ಇದೆ. ಪಮ್ಮಿ ಕೊಡಿಯಾಲ್ಬೈಲ್ ಅವರ ಕಥೆಗೆ ಎನ್ನಾರ್ ಕೆ. ವಿಶ್ವನಾಥ್ ಅವರು ವಿಸ್ತಾರ ರೂಪ ನೀಡಿದ್ದಾರೆ. ಸತೀಶ್ ಬ್ರಹ್ಮಾವರ್ ಚಿತ್ರದ ನಿರ್ಮಾಣ ನಿರ್ವಹಣೆ ಮಾಡಲಿದ್ದಾರೆ.
Click this button or press Ctrl+G to toggle between Kannada and English