[1]ಮಂಗಳೂರು: ಸರ್ವೀಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ನಗರದ ಮೋತಿಮಹಲ್ ಹೋಟೆಲ್ ಬಳಿ ನಡೆದಿದೆ.
ಗೋವಾ ಮೂಲದ ಸರ್ಫರಾಜ್(34) ಮೃತ ವ್ಯಕ್ತಿ. ಬಿ.ಸಿ.ರೋಡ್ನಿಂದ ಮಂಗಳೂರಿಗೆ ವೇಗವಾಗಿ ಬರುತ್ತಿದ್ದ ಎನ್ಎಸ್ ಬಸ್ ಮೋತಿ ಮಹಲ್ ಬಳಿ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸರ್ಫರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ , ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಮಂಗಳೂರಿನ ಎಕ್ಕೂರು ಗ್ರಾಮದ ಯುವತಿಯನ್ನು ಮದುವೆಯಾಗಿದ್ದ ಸರ್ಫರಾಜ್, ಈದ್ ಆಚರಿಸಲು ಮಾವನ ಮನೆಗೆ ಬಂದಿದ್ದರು. ಇಂದೇ ಅವರು ಗೋವಾಗೆ ತೆರಳಿ ಅಲ್ಲಿಂದ ಗಲ್ಫ್ ಹೋಗಬೇಕಿತ್ತು.