[1]ಮಂಜೇಶ್ವರ: ಗಡಿನಾಡು ಕಾಸರಗೋಡು ರಾಷ್ಟ್ರದಲ್ಲೇ ಬಹು ಭಾಷಾ ಸಂಗಮ ಭೂಮಿಯಾಗಿ ಗುರುತಿಸಿಕೊಂಡಿದ್ದು ವಿಶೇಷತೆಯಾಗಿದೆ. ಇಲ್ಲಿಯ ಬಹುಸಂಖ್ಯೆಯ ಜನರ ಮನೆಮಾತಾದ ತುಳು ಸಹಿತ ಇತರ ಭಾಷೆಗಳು ವಿದ್ಯಾರ್ಥಿಗಳಲ್ಲಿ ಶಾಲಾ ಕಲಿಕೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀಳಬಾರದೆಂಬ ಉದ್ದೇಶದಿಂದ ಆಯೋಜಿಸಲಾಗುವ ಕಾರ್ಯಕ್ರಮ ಉತ್ತಮ ಬೆಳವಣಿಗೆ ಎಂದು ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ವ ಶಿಕ್ಷಾ ಅಭಿಯಾನ್ ಕಾಸರಗೋಡು, ಬಿಆರ್ಸಿ ವತಿಯಿಂದ ನಡೆಸಲ್ಪಡುವ ‘ತುಳು ಸೌರಭ ಆನೆಕಲ್ಲು ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತುಳು ಭಾಷಾ ಹಿನ್ನೆಲೆಯಿಂದ ಬರುವ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವಾಗ ಎದುರಾಗುವ ಕೆಲವು ಕಠಿಣತೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸದಸ್ಯೆ ಸೀತಾ ವಹಿಸಿದ್ದರು. ಕಾಸರಗೋಡು ಡಿಪಿಒ ಇಬ್ರಾಹಿಂ ಪ್ರಾಸ್ತಾವಿಕ ಮಾತ ನಾಡಿದರು. ಅತಿಥಿಯಾಗಿ ಭಾಗವಹಿಸಿದ ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್. ಅವರು ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ಮುಂದಿಟ್ಟರು. ಪ್ರಸ್ತುತ ಬಿಪಿಒ ರೋಜ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್, ಮಾತೃಸಂಘದ ಅಧ್ಯಕ್ಷೆ ಜಮೀಲ, ಸಂಪನ್ಮೂಲ ವ್ಯಕ್ತಿಗಳಾದ ವಿಜಯ ಮಾಸ್ತರ್, ಸದಾಶಿವ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಿಇಸಿ ಕಾರ್ಯದರ್ಶಿ ಮಜೀದ್ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾರ್ವತಿ ಆನೆಕಲ್ ಅವರು ಪಾಡ್ದನ ಗೀತೆಯನ್ನು ಹಾಡಿ ತುಳು ಗೀತೆಯ ಲೋಕಕ್ಕೆ ಎಲ್ಲರನ್ನು ಕೊಂಡೊಯ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಪುಟಾಣಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಭಟ್ ಸ್ವಾಗತಿಸಿ, ರೇಣುಕಾ ವಂದಿಸಿದರು. ಶ್ರೀಕುಮಾರಿ ಹಾಗೂ ಜೀವನ್ ಕಾರ್ಯಕ್ರಮ ನಿರೂಪಿಸಿದರು.