[1]ಪುತ್ತೂರು: ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಉರುಳಿಗೆ ಸಿಲುಕಿ ಮತ್ತೆ ಕಾಡಿಗೆ ಸೇರಲು ಹರಸಾಹಸಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಮಾಲೆತ್ತೋಡಿಯಲ್ಲಿ ನಡೆದಿದೆ.
ಕೊಳ್ತಿಗೆ ಗ್ರಾಮದ ಮಾಲೆತ್ತೋಡಿಯ ಬಾಲಕೃಷ್ಣ ಕೆದಿಲಾಯ ಎಂಬುವರ ತೋಟದ ಬದಿಯಲ್ಲಿ ಕಾಡುಹಂದಿಗೆ ಇರಿಸಿದ್ದ ಉರುಳಿಗೆ ಚಿರತೆ ಸಿಲುಕಿತ್ತು. ಇಡೀ ದಿನ ಸಂಕಟದಲ್ಲಿ ಸಿಲುಕಿಕೊಂಡು ಸಂಜೆ ವೇಳೆಗೆ ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದಿಂದ ಕಾಡು ಸೇರಿತು.
ತೋಟಕ್ಕೆ ನೀರು ಹಾಯಿಸಲು ಹೋದ ವೇಳೆ ಚಿರತೆ ಉರುಳಿಗೆ ಬಿದ್ದಿರುವುದು ಬಾಲಕೃಷ್ಣರ ಮಗ ಮಧು ಕೆದಿಲಾಯ ಕಂಡಿದ್ದರು. ಬಳಿಕ ಅರಣ್ಯ ಇಲಾಖೆಗೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ಚಿರತೆಯ ರಕ್ಷಣಾ ಕಾರ್ಯ ನಡೆಸಿದ್ದರು.
ಸ್ಥಳದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಸೇರಿದ್ದರು. ಇವರನ್ನು ಹತೋಟಿಗೆ ತರಲು ಪೊಲೀಸ್ ಹಾಗೂ ಅರಣ್ಯ ಇಲಾಖೆಯವರು ಹರಸಾಹಸಪಟ್ಟರು. ನಿನ್ನೆ ಬೆಳಗ್ಗೆ ಉರುಳಿಗೆ ಸಿಲುಕಿದ್ದ ಚಿರತೆಯನ್ನು ಸಂಜೆಯ ವೇಳೆ ಬೋನಿಗೆ ಹಾಕುವಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾದರು.