- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿರಿಯಡ್ಕದಲ್ಲಿ ರೌಡಿ ಶೀಟರ್ ಪ್ರವೀಣ್ ಕುಲಾಲ್ ವರ್ವಾಡಿಯ ಬರ್ಬರ ಹತ್ಯೆ

Praveen Kulal [1]ಉಡುಪಿ: ಇಲ್ಲಿನ ಹಿರಿಯಡ್ಕದಲ್ಲಿ ರೌಡಿ ಶೀಟರ್ ಪ್ರವೀಣ್ ಕುಲಾಲ್ ವರ್ವಾಡಿ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರವೀಣ್‌‌ನನ್ನು ಮೂವರು ದುಷ್ಕರ್ಮಿಗಳು ತಲವಾರು, ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 12ರ ಸಮಯದಲ್ಲಿ ಹಿರಿಯಡ್ಕದ ದಿಯಾ ಗಾರ್ಡನ್ ಎಂಬ ಬಾರ್‌‌ಗೆ ಪ್ರವೀಣ್ ಬಂದಿದ್ದ. ಅದೇ ಸಮಯದಲ್ಲಿ ಅಲ್ಲಿಗೆ ಒಬ್ಬ ವ್ಯಕ್ತಿ ಆಗಮಿಸಿದ್ದು, ಪರಸ್ಪರ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಅವರಿಬ್ಬರ ಮಧ್ಯೆ ಜಗಳ ಆರಂಭವಾಗಿದೆ. ತಕ್ಷಣ ಬಾರಿನ ಮಾಲೀಕ ಅವರನ್ನು ಹೊರಗೆ ಕಳುಹಿಸಿದ್ದಾರೆ.

ಅಲ್ಲಿಗೆ ಆಗಮಿಸಿದ ಮತ್ತಿಬ್ಬರು ಪ್ರವೀಣ್ ಜೊತೆ ಹೊಡೆದಾಟ ಆರಂಭಿಸಿದ್ದಾರೆ. ಬಳಿಕ ಬಾರ್‌‌‌ನ ಎದುರು ಭಾಗದಲ್ಲಿದ್ದ ಅಂಗಡಿಯ ಮುಂಭಾಗದಲ್ಲಿ ಹೊಡೆದಾಟ ನಡೆದು ದುಷ್ಕರ್ಮಿಗಳು ತಲವಾರ್‌‌‌ನಿಂದ ಪ್ರವೀಣ್‌‌ನನ್ನು ಮನಬಂದಂತೆ ಕಡಿದಿದ್ದಾರೆ. ಬಳಿಕ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ. ತೀವ್ರ ಗಾಯಗೊಂಡ ಪ್ರವೀಣ್ ಅಂಗಡಿ ಎದುರೇ ಪ್ರಾಣ ಬಿಟ್ಟಿದ್ದಾನೆ.

ಹೊಡೆದಾಟದ ಪರಿಣಾಮ ಅಂಗಡಿಯ ಮುಂಭಾಗದಲ್ಲಿ ರಕ್ತದ ಕೋಡಿ ಹರಿದಿದೆ. ಪ್ರವೀಣ್ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹಳೆಯ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ. ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ. ಬಾಲಕೃಷ್ಣ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪ್ರವೀಣ್ ಹಿರಿಯಡ್ಕದ ಸಮೀಪದ ವರ್ವಾಡಿ ನಿವಾಸಿ. ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕಾರ್ಕಳದ ಸುಲೈಮೈನ್ ಕೊಲೆ, ಹೆಬ್ರಿ ಬಶೀರ್ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳಲ್ಲಿ ಪ್ರವೀಣ್ ಭಾಗಿಯಾಗಿದ್ದ ಎನ್ನಲಾಗಿದೆ. ಕಳೆದ ಬಾರಿ ಜಿಲ್ಲಾ ಪಂಚಾಯತ್ ಸದಸ್ಯನ ಮೆಲೆ ಹಲ್ಲೆ ನಡೆದ ಪ್ರಕರಣದಲ್ಲೂ ಪ್ರವೀಣ್ ಹೆಸರು ಕೇಳಿ ಬಂದಿತ್ತು.

ಈತನ ಮೇಲೆ 16 ಪ್ರಕರಣ ದಾಖಲಾಗಿದ್ದು, ಈತ ರೌಡಿಶೀಟರ್ ಆಗಿದ್ದ. ಈತನ ಮೇಲೆ ಗೂಂಡಾ ಕಾಯ್ದೆ ಕೂಡಾ ಜಾರಿಯಾಗಿತ್ತು. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲಾ ಎಸ್ಪಿ ಬಾಲಕೃಷ್ಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎನ್ನಲಾಗಿದೆ.