[1]ಮಂಗಳೂರು : ಜನರಿಗೆ ನೀರು ಕೊಡದೆ ಸತಾಯಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಈಗ ನೀರನ್ನು ಸಮುದ್ರಕ್ಕೆ ಬಿಡುವ ಮೂಲಕ ಜನರ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಎಪ್ರಿಲ್ ತಿಂಗಳಲ್ಲಿ ಮಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವಾಗ ನೀರು ಮೂರು ದಿನಕ್ಕೊಮ್ಮೆ ಬಿಡುತ್ತೇವೆ ಎಂದು ಮೇಯರ್ ಕವಿತಾ ಸನಿಲ್ ಅವರು ನೀರಿಗೆ ರೇಶನಿಂಗ್ ವ್ಯವಸ್ಥೆ ಮಾಡಿದ್ದರು. ಆಗ ಬಿಜೆಪಿಯ ನಿಯೋಗ ಸ್ವತ: ತುಂಬೆ ವೆಂಟೆಂಡ್ ಡ್ಯಾಂಗೆ ಭೇಟಿಕೊಟ್ಟು ತಜ್ಞರೊಂದಿಗೆ ಮಾತನಾಡಿದಾಗ ಡ್ಯಾಂನಲ್ಲಿರುವ ನೀರು ಮೇ ಕೊನೆಯ ತನಕ ನಿತ್ಯ ಪೂರೈಸುವಷ್ಟು ಇದೆ ಎಂದು ಗೊತ್ತಾಗಿತ್ತು. ಆದರೆ ಮೇಯರ್ ಅತಿ ಬುದ್ಧಿವಂತಿಕೆ ಪ್ರದಶರ್ಿಸಿ ಜನರು ಪ್ರತಿ ದಿನ ನೀರಿಗಾಗಿ ಪರಿತಪಿಸುವಂತೆ ಮಾಡಿದ್ದರು. ಬಿಜೆಪಿ ನಿರಂತರ ನಡೆಸಿದ ಪ್ರತಿಭಟನೆಯಿಂದ ಕೊನೆಗೂ ಮೇಯರ್ ತಮ್ಮ ಹಟ ಬಿಟ್ಟಿದ್ದರು. ಅವರ ಅವೈಜ್ಞಾನಿಕ ಯೋಚನೆ ಆವತ್ತೆ ಎಲ್ಲರಿಗೂ ಗೊತ್ತಾಗಿತ್ತು. ಈಗ ನೀರು ಡ್ಯಾಂನಲ್ಲಿ ಹೆಚ್ಚಾಗಿದೆ ಎಂದು ಡ್ಯಾಂ ಬಾಗಿಲು ತೆರೆದು ಸಮುದ್ರಕ್ಕೆ ಬಿಡಲಾಗುತ್ತಿದೆ. ಇದರ ಬದಲು ಆವತ್ತು ಬಿಜೆಪಿ ಮುಖಂಡರು ಹೇಳಿದ್ದ ಮಾತನ್ನು ಕೇಳಿದ್ದರೆ ಜನರಿಗೆ ತೊಂದರೆ ಕೊಡುವುದನ್ನು ತಪ್ಪಿಸಬಹುದಿತ್ತು. ಸಾಮಾನ್ಯ ಜನರ ಕಷ್ಟಗಳನ್ನು ಅರಿಯದ ಮೇಯರ್ ಅವರು ಈಗ ಸಮುದ್ರಕ್ಕೆ ವ್ಯರ್ಥವಾಗಿ ಹೋಗುತ್ತಿರುವ ನೀರಿನ ಬಗ್ಗೆ ಏನೆನ್ನುತ್ತಾರೆ ಎಂದು ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.