[1]ಮಂಗಳೂರು: ಲಾರಿ ಮತ್ತು ಕಂಟೈನರ್ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸೇತುವೆ ಬಳಿ ನಡೆದಿದೆ.
ಕಂಟೈನರ್ ಮತ್ತು ಲಾರಿ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದಿವೆ. ಮೃತರನ್ನು ಮೀನು ಸಾಗಾಟ ಲಾರಿ ಚಾಲಕ ಆಲಪ್ಪುಯ ಚೇರ್ತಲದ ಬಿಜು ಎರಮಳ್ಳೂರು (45) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಆಲಪ್ಪುಳದ ಬಾಬು (39) ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಟೈನರ್ ಲಾರಿಯಲ್ಲಿದ್ದ ಉತ್ತರ ಪ್ರದೇಶದ ಸಂತೋಷ್, ಸಂತಿನ್ ಎಂಬುವರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಿಂದ ಆಲಪ್ಪುಳಕ್ಕೆ ತೆರಳುತ್ತಿದ್ದ ಮೀನು ಲಾರಿ ಮತ್ತು ಮಂಗಳೂರು ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ನಡುವೆ ಅಪಘಾತ ನಡೆದಿದೆ. ಅಪಘಾತದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕುಂಬಳೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಂಚಾರ ಸುಗಮಗೊಳಿಸಿದರು. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.