[1]ಮಂಗಳೂರು: ಯುವತಿಯ ಮೇಲೆ ಗ್ರಾಮ ಪಂಚಾಯತ್ ಸದಸ್ಯೆಯೋರ್ವರ ಮಗ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಯುವತಿಯ ಪೋಷಕರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಜೀಪಮೂಡ ಗ್ರಾಮ ಪಂಚಾಯತ್ನ ಕಾಂಗ್ರೆಸ್ ಸದಸ್ಯೆಯೋರ್ವರ ಮಗ ಜಯಂತ್ (20) ಎಂಬಾತನೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಎರಡು ದಿನಗಳ ಹಿಂದೆ ಈ ಪ್ರಕರಣ ನಡೆದಿದೆ ಎಂದು ತಿಳಿದುಬಂದಿದೆ.
ಬಂಟ್ವಾಳದ ಸಜೀಪಮೂಡದ ಮಿತ್ತಮಜಲು ಎಂಬಲ್ಲಿ ಯುವತಿ ಮನೆಯಿಂದ ಉದ್ಯೋಗಕ್ಕೆಂದು ತೆರಳುವ ವೇಳೆ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಯುವತಿ ಕಲ್ಲಿನಿಂದ ಆತನ ಮೇಲೆ ಹಲ್ಲೆ ಮಾಡಿ ಅಲ್ಲಿಂದ ಓಡುವಾಗ ಆಕೆಯ ತಲೆಗೆ ಬಡಿಗೆಯಿಂದ ಹೊಡೆದಿದ್ದಾನೆ. ಅಷ್ಟಾದರೂ ಆಕೆ ಗದ್ದೆಯ ಹಾದಿಯಲ್ಲಿ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾಳೆ. ಆದರೆ ಅಲ್ಲಿಯೂ ಆಕೆಯನ್ನು ಬೆನ್ನಟ್ಟಿ ಆಕೆಯ ಕೊಲೆಗೆ ಯತ್ನಿಸಿದ್ದಾನೆ. ಆಗ ಯುವತಿಯ ಬೊಬ್ಬೆ ಕೇಳಿ ಸ್ಥಳೀಯರು ರಕ್ಷಣೆಗೆ ಬಂದಿದ್ದಾರೆ. ಸ್ಥಳೀಯರನ್ನು ಕಂಡು ಆರೋಪಿ ಜಯಂತ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಆರೋಪಿ ಜಯಂತ್ ಹಲವಾರು ದಿನಗಳಿಂದ ಈ ಯುವತಿಯನ್ನು ಹಿಂಬಾಲಿಸುತ್ತಿದ್ದ. ಅನುಮಾನಗೊಂಡ ಯುವತಿ ತನ್ನ ಬ್ಯಾಗ್ನಲ್ಲಿ ಕಲ್ಲೊಂದನ್ನು ಇಟ್ಟುಕೊಂಡಿದ್ದಳು. ರಕ್ಷಣೆಗೆಂದು ಮುನ್ನೆಚ್ಚರಿಕೆ ವಹಿಸಿಕೊಂಡು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದ ಕಲ್ಲು ಯುವತಿಯ ಮಾನ ಪ್ರಾಣ ಉಳಿಸಿದೆ. ಆರೋಪಿಯ ವಿರುದ್ಧ ಈಗಾಗಲೇ ಅನೇಕ ದೂರುಗಳು ಕೇಳಿಬಂದಿವೆ ಎಂಬ ಆರೋಪ ಕೇಳಿಬಂದಿದೆ.