- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು: ಮನಮೋಹನ್ ಸಿಂಗ್ ವಿರುದ್ಧ ಆರೋಪಕ್ಕೆ ಶರದ್ ಪವಾರ್ ಕಿಡಿ

shard-power [1]ನಾಗ್ಪುರ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುಜರಾತ್ ನಲ್ಲಿ ಬಿಜೆಪಿಯನ್ನು ಸೋಲಿಸಲು ಪಾಕಿಸ್ತಾನದ ಜತೆಗೆ ಪಿತೂರಿ ನಡೆಸಿದ್ದಾರೆ ಎಂದು ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗಬೇಕು ಎಂದು ಎನ್ಸಿಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಹೇಳಿದ್ದಾರೆ.

ಮನಮೋಹನ್ ಸಿಂಗ್ ಬೆಂಬಲಕ್ಕೆ ನಿಂತಿರುವ ಪವಾರ್, ವಿಶ್ವದಲ್ಲಿ ಯಾರು ಕೂಡಾ ಮನಮೋಹನ್ ಸಿಂಗ್ ಅವರ ಕಡೆ ಬೊಟ್ಟು ಮಾಡಲಾಗದಂತ ವ್ಯಕ್ತಿತ್ವ ಅವರದ್ದು ಅಂತಹವರ ವಿರುದ್ಧ ನರೇಂದ್ರ ಮೋದಿ ಅವರು ಕೀಳುಮಟ್ಟದ ಆರೋಪ ಮಾಡುತ್ತಿದ್ದು ಅವರಿಗೆ ನಾಚಿಕೆಯಾಗಬೇಕು ಎಂದರು.

ಅಮಾನತುಗೊಂಡಿರುವ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರ ನಿವಾಸದಲ್ಲಿ ಡಿಸೆಂಬರ್ 6ರಂದು ನಡೆದ ಸಭೆಯಲ್ಲಿ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪಾಕಿಸ್ತಾನದ ಜತೆ ನಡೆಸಿರುವ ಪಿತೂರಿ ಎಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸಿರುವ ಮೋದಿ ಕ್ರಮ ಖಂಡನೀಯ ಎಂದು ಶರದ್ ಪವಾರ್ ಹೇಳಿದ್ದಾರೆ.

ದೇಶದ ಪ್ರಧಾನಿಯಾಗಿರುವ ಮೋದಿ ಅವರಿಗೆ ಇಂಥ ಆರೋಪ ಮಾಡಲು ನಾಚಿಕೆಯಾಗಬೇಕು. ದೇಶದ ಮಾಜಿ ಪ್ರಧಾನಿ ಬಗ್ಗೆ ಮತ್ತು ಮಾಜಿ ರಕ್ಷಣಾ ಅಧಿಕಾರಿಗಳ ಮೇಲೆ ನೀವು ಆರೋಪ ಮಾಡಿದ್ದೀರಿ ಎಂದು ಪವಾರ್ ಟೀಕಿಸಿದ್ದಾರೆ.

ಶರದ್ ಪವಾರ್ 77ನೇ ಹುಟ್ಟುಹಬ್ಬದ ಹಿನ್ನೆಲೆ ಜನ ಆಕ್ರೋಶ ಹಲ್ಲಾ ಬೋಲ್ ಸಾರ್ವಜನಿಕ ರ್ಯಾಲಿಯನ್ನು ಕಾಂಗ್ರೆಸ್ ಹಾಗೂ ಎನ್ಸಿಪಿ ಜಂಟಿಯಾಗಿ ಆಯೋಜಿಸಿತ್ತು. ಈ ವೇಳೆ ಪವಾರ್ ಮೋದಿ ವಿರುದ್ಧ ಗುಡುಗಿದ್ದಾರೆ.