ಮಂಗಳೂರು : ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಅವರ ವಾಹನಕ್ಕೆ ಮಂಗಳೂರು ನಗರದ ಟ್ರಾಫಿಕ್ ಪೊಲೀಸರು ಲಾಕ್ ಮಾಡಿ ಪ್ರಕರಣ ದಾಖಲಿಸುವ ಮೂಲಕ ಕಾನೂನು ಪಾಲನಾ ನಿಯಮಕ್ಕೆ ಮತ್ತೊಮ್ಮೆ ಚಾಲನೆ ನೀಡಿದ್ದಾರೆ.
ಮಂಜಯ್ಯ ಶೆಟ್ಟಿ ಅವರು ಶುಕ್ರವಾರ ಸಂಜೆ 5.15 ರ ವೇಳೆಗೆ ತನ್ನ ಕಾರನ್ನು ಪಿ.ವಿ.ಎಸ್. ಜಂಕ್ಷನ್ ಬಳಿ ಎಂ.ಜಿ. ರಸ್ತೆಯಲ್ಲಿ ಮಾನಸ ಟವರ್ ಎದುರು ನಿಲ್ಲಿಸಿ ಹೋಗಿದ್ದರು. ಈ ಮಾರ್ಗವಾಗಿ ಬಂದ ಟ್ರಾಫಿಕ್ ಪೊಲೀಸರು ಇದನ್ನು ಗಮನಿಸಿ ಕಾರು ಯಾರದ್ದೆಂದು ವಿಚಾರಿಸಿ ಹಲವು ಬಾರಿ ಕೂಗಿ ಕರೆದರು. ಆದರೆ ಸುಮಾರು 5 ನಿಮಿಷ ಕಳೆದರೂ ಸಂಬಂಧ ಪಟ್ಟ ಯಾರೂ ಬಂದಿಲ್ಲ. ಆಗ ಪೊಲೀಸರು ಕಾರಿನ ಮುಂಬದಿಯ ಬಲಭಾಗದ ಟೈರಿಗೆ ಲಾಕ್ ಮಾಡಿ , ಪ್ರಕರಣ ದಾಖಲಿಸಿದ ಬಗ್ಗೆ ಕೆಂಪು ಚೀಟಿಯನ್ನು ಬರೆದು ಕಾರಿನ ಮೇಲೆ ಅಂಟಿಸಿ ಹೋದರು.
ಸುಮಾರು 5.45 ರ ವೇಳೆಗೆ ಕಾರಿನ ಮಾಲಕ ಮಂಜಯ್ಯ ಶೆಟ್ಟಿ ಅವರು ಬಂದು ನೋಡಿದಾಗ ಕಾರು ಲಾಕ್ ಮಾಡಲಾಗಿತ್ತು. ಬಳಿಕ ಅವರು ಪಿ.ವಿ.ಎಸ್. ಜಂಕ್ಷನ್ ಬಳಿ ಇದ್ದ ಟ್ರಾಫಿಕ್ ಪೊಲೀಸರ ಬಳಿಗೆ ತೆರಳಿ ವಿಷಯವನ್ನು ತಿಳಿಸಿದರು. ಅಲ್ಲಿದ್ದ ಟ್ರಾಫಿಕ್ ಪೊಲೀಸರು ದೂರವಾಣಿ ಕರೆ ಮಾಡಿ ಕಾರಿಗೆ ಮಾಡಿದ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದರು. 6.15 ರ ವೇಳೆಗೆ ಅವರು ಆಗಮಿಸಿ ಲಾಕರ್ ತೆಗೆದು ಮಂಜಯ್ಯ ಶೆಟ್ಟಿ ಅವರಿಗೆ ಕಾರನ್ನು ಕೊಂಡೊಯ್ಯಲು ಅನುವು ಮಾಡಿ ಕೊಟ್ಟರು.