ವಲಸೆ ಕಾರ್ಮಿಕರಿಗೆ ಅಕ್ಕಿ: ಸಚಿವ ಆಗ್ರಹ

10:48 AM, Wednesday, January 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

U-T-Kaderಮಂಗಳೂರು: ದೇಶದ ವಿವಿಧ ಭಾಗ ಗಳಿಂದ ದುಡಿಮೆಗಾಗಿ ಕರ್ನಾಟಕಕ್ಕೆ ವಲಸೆ ಬರುವ ಕಾರ್ಮಿಕರಿಗೆ ಉಚಿತ ವಾಗಿ ಅಥವಾ ರಿಯಾಯಿತಿ ದರದಲ್ಲಿ ಅಕ್ಕಿ ವಿತರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ‘ಕಾರ್ಮಿಕ ವರ್ಗದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ, ಒಡಿಶಾ ಮುಂತಾದ ರಾಜ್ಯಗಳಿಂದ ಕೆಲಸಕ್ಕಾಗಿ ಕರ್ನಾಟಕಕ್ಕೆ ಬರುವ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಅಕ್ಕಿ ವಿತರಿಸಬೇಕು. ರಾಜ್ಯದ ಬಡ ನಾಗರಿಕರಿಗೆ ಅನ್ನಭಾಗ್ಯ ಯೋಜನೆ ಯಡಿ ಉಚಿತ ಅಕ್ಕಿ ದೊರೆಯುತ್ತಿದೆ. ಆದರೆ ದೂರದಿಂದ ಬರುವ ವಲಸೆ ಕಾರ್ಮಿಕರಿಗೆ ಆಹಾರದ ಸಮಸ್ಯೆ ಉಂಟಾಗುತ್ತಿದೆ. ಅವರಿಗೆ ನೆರವಿನ ಅಗತ್ಯವಿದೆ’ ಎಂದು ಹೇಳಿದರು.

ರಾಜ್ಯಕ್ಕೆ ವಲಸೆ ಬಂದಿರುವ ಕಾರ್ಮಿ ಕರ ಮಾಹಿತಿಯನ್ನು ಇಲಾಖೆಯು ಸಂಗ್ರಹಿಸುತ್ತಿದೆ. ಅದರ ಆಧಾರದಲ್ಲಿ ಕೇಂದ್ರಕ್ಕೆ ವಿವರವಾದ ಪತ್ರವೊಂದನ್ನು ಬರೆಯಲಾಗುವುದು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಸಿದ ಅನ್ನಭಾಗ್ಯ ಯೋಜ ನೆಯನ್ನು ವಿರೋಧ ಪಕ್ಷದ ನಾಯಕರು ‘ಕನ್ನಭಾಗ್ಯ’ ಎಂದು ಟೀಕಿಸಿದ್ದರು. ಆದರೆ ಇದೀಗ ಆ ಯೋಜನೆ ಯಶಸ್ವಿಯಾಗಿದೆ.

ಸಮೀಕ್ಷೆಗಳೂ ಅನ್ನಭಾಗ್ಯದ ಯಶಸ್ಸನ್ನು ಸಾಬೀತುಪಡಿಸಿವೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಇದನ್ನು ಗಮನಿಸಿದ ಬಿಜೆಪಿ ಮುಖಂಡರು, ಅನ್ನಭಾಗ್ಯ ಯೋಜನೆ ತಮ್ಮದೇ ಸಾಧನೆ ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ಯುಪಿಎ ಸರ್ಕಾರ ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಜಾರಿಗೆ ತಂದಿದ್ದು, ಭಾರತದ ನಾಗರಿಕರಿಗೆ 5 ಕೆಜಿ ಅಕ್ಕಿಯನ್ನು ರಿಯಾ ಯಿತಿ ದರದಲ್ಲಿ ನೀಡುವಂತೆ ಕಾಯ್ದೆಯೇ ಸೂಚಿಸುತ್ತದೆ. ಆದರೆ 5 ಕೆಜಿ ಅಕ್ಕಿಯು ಒಬ್ಬ ವ್ಯಕ್ತಿಗೆ ಸಾಕಾಗುವುದಿಲ್ಲ ಎಂದು ಅರಿತು ರಾಜ್ಯ ಸರ್ಕಾರ ಏಳು ಕೆಜಿ ಅಕ್ಕಿ ವಿತರಿಸುತ್ತಿದೆ.

ಕೇಂದ್ರದ ನೆರವು ಕೇವಲ ಐದು ಕೆಜಿ ಅಕ್ಕಿಗೆ ಮಾತ್ರ ದೊರೆಯುತ್ತಿದೆ. ಉಳಿದೆರಡು ಕೆಜಿ ಅಕ್ಕಿಯ ದರವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಜನರಿಗೆ ಪ್ರೊಟೀನ್‌ಯುಕ್ತ ಆಹಾರ ಲಭಿಸಲಿ ಎಂಬ ಕಾರಣಕ್ಕೆ ತೊಗರಿಬೇಳೆಯನ್ನೂ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಆದರೆ ಚುನಾವಣೆ ಹತ್ತಿರವಾಗುತ್ತಿ ದ್ದಂತೆಯೇ ಬಿಜೆಪಿಗೆ ಹೇಳಿಕೊಳ್ಳಲು ಯಾವುದೇ ಸಾಧನೆ ಇಲ್ಲದೇ ಅನ್ನ ಭಾಗ್ಯದ ಯಶಸ್ಸನ್ನು ತನ್ನ ಬುಟ್ಟಿಗೆ ಹಾಕಿ ಕೊಳ್ಳಲು ಹವಣಿಸುತ್ತಿದೆ ಎಂದು ಅವರು ಆರೋಪಿಸಿದರು.

ಶೇ 80 ಪಿಒಎಸ್‌ ವಿತರಣೆ: ನ್ಯಾಯಬೆಲೆ ಅಂಗಡಿಗಳಿಗೆ ಪಾಯಿಂಟ್‌ ಆಫ್‌ ಸೇಲ್ಸ್‌ ಯಂತ್ರಗಳ ವಿತರಣೆ ಶೇ 80 ರಷ್ಟು ಮುಕ್ತಾಯವಾಗಿದೆ. ಹೆಚ್ಚಿನ ಅಂಗಡಿಗಳಲ್ಲಿ ಪಿಒಎಸ್‌ ಇದೆ. ಎಲ್ಲ ಅಂಗಡಿಗಳ ಮಾಲೀಕರೂ ಈ ಯಂತ್ರ ಅಳವಡಿಸಿದಲ್ಲಿ ಆಹಾರ ವಿತರಣೆ ಸು ಸೂತ್ರವಾಗಲಿದೆ. ಬಳಿಕ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ನೀಡುವ ಕ ಮಿಷನ್‌ ಹೆಚ್ಚಿಸಲಾಗುವುದು ಎಂದರು.

ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜ ನೆಗಳಿಗೆ ಶೇ 40ರಷ್ಟು ನೆರವು ನೀಡುತ್ತಿದ್ದ ಕೇಂದ್ರ ಸರ್ಕಾರ ಪ್ರಸ್ತುತ ಶೇ 20ರಷ್ಟು ನೆರವನ್ನು ನೀಡುತ್ತಿದೆ. ಆದ್ದರಿಂದ ರಾಜ್ಯ ದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಟ್ಟಡಗಳ ಸುಧಾರಣೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಉಳ್ಳಾಲದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಖಾಸಗಿ ಹೋಟೆಲ್‌ ಮಾಲೀಕರ ತಕರಾರು ಇದೆಯೇ ವಿನಃ ಧಾರ್ಮಿಕ ವಿಷಯವಾಗಿ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

ಕಡಿಮೆ ದರಕ್ಕೆ ಆಹಾರ ಕೊಡುವ ಕ್ಯಾಂಟೀನ್‌ನಿಂದ ತಮ್ಮ ವ್ಯಾಪಾರಕ್ಕೆ ತೊಡಕಾಗಬಹುದು ಎಂಬ ಆತಂಕ ಅವರದು. ಆದರೆ ಹಾಗೇನೂ ಆಗದು. ಸರ್ಕಾರಿ ಜಾಗವನ್ನು ಕ್ಯಾಂಟೀನ್‌ ನಿರ್ಮಿಸಲು ನಿಗದಿ ಪಡಿಸಲಾಗಿದೆ. ಆ ಜಾಗದಲ್ಲಿರುವ ಕೊರಗಜ್ಜ ದೈವದ ಗುಡಿಗೆ ಯಾವುದೇ ಹಾನಿ ಮಾಡುವುದಿಲ್ಲ. ಹೋಗಿ ಬರಲು ದಾರಿಯನ್ನೂ ನೀಡಲಾಗಿದೆ. ಭಕ್ತರು ಇಚ್ಛಿಸಿದಲ್ಲಿ ಮುಂದಿನ ದಿನಗಳಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಅದರ ವರ್ಗಾವಣೆಯ ಬಗ್ಗೆಯೂ ಚಿಂತಿಸಲಾಗುವುದು. ಬಡಜನರಿಗೆ ನೆರವಾಗುವ ಕ್ಯಾಂಟೀನ್‌ಗೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ವಿವರಿಸಿದರು.

ದೀಪಕ್‌ ರಾವ್‌ ಅಥವಾ ಬಶೀರ್‌ ಹತ್ಯೆಗೆ ಸಂಬಂಧಿಸಿದ ಮಾಹಿತಿ ಏನೇ ಇದ್ದರೂ ಅದನ್ನು ಪೊಲೀಸರಿಗೆ ನೀಡಬೇಕು. ಸಾಮಾಜಿಕ ಜಾಲತಾಣದಲ್ಲಿ ವಿನಾ ಕಾರಣ ಆತಂಕ ಸೃಷ್ಟಿಸುವುದು ಸರಿಯಲ್ಲ ಎಂದು ಸಚಿವರು ಹೇಳಿದರು. ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕೇ ಹೊರತು ಕೆಟ್ಟ ಉದ್ದೇಶಕ್ಕಲ್ಲ. ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ತನಿಖೆಯ ಹಾದಿ ತಪ್ಪಿಸುವವರು ದೇಶದ್ರೋಹಿಗಳು.

ಅಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತ ಅವರು, ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಿದಲ್ಲಿ ತನಿಖೆಗೆ ಅನುಕೂಲವಾಗುತ್ತದೆ’ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English