ಮಂಗಳೂರು: ನಗರಕ್ಕೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಬೃಹತ್ ಅಂತಾರಾಜ್ಯ ಗಾಂಜಾ ಜಾಲವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಗಾಂಜಾ ಕಿಂಗ್ ಪಿನ್ ಎಂದೇ ಗುರುತಿಸಲಾಗುವ ಸಲೀಂ ಬಾಷಾ ಎಂಬವನನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಹೊರವಲಯದ ತಲಪಾಡಿಯ ತೌಡುಗೋಳಿಯಲ್ಲಿ ದಾಳಿ ನಡೆಸಿದ್ದ ರೌಡಿ ನಿಗ್ರಹ ದಳದ ಪೊಲೀಸರು ಮಹಮ್ಮದ್ ಅಝೀಝ್ ಎಂಬವರನ್ನು ಬಂಧಿಸಿ ಆತನಿಂದ 10 ಕಿಲೋ ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡಿದ್ದರು.
ಬಂಧಿತ ಮಹಮ್ಮದ್ ಅಝೀಝ್ ನನ್ನು ತನಿಖೆಗೆ ಒಳ ಪಡಿಸಿದ ಸಂದರ್ಭದಲ್ಲಿ ಆಂಧ್ರದ ಚಿತ್ತೂರಿನ ಪನಮ್ನೇರು ಎಂಬಲ್ಲಿಂದ ಸಲೀಂ ಬಾಷಾ ಎಂಬವನು ಗಾಂಜಾ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ಈ ಹಿನ್ನಲೆಯಲ್ಲಿ ನಗರದ ಕೊಣಾಜೆ ಠಾಣೆಯ ಪೊಲೀಸರು ಹಾಗು ರೌಡಿ ನಿಗ್ರಹದಳದ ಪೊಲೀಸರು ಆಂಧ್ರ ಪ್ರದೇಶಕ್ಕೆ ತೆರಳಿದ್ದರು. ಸಲೀಂ ಬಾಷಾನ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಿದ ಪೊಲೀಸರ ತಂಡ ಅಂಧ್ರ ಪ್ರದೇಶ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿ, ನಗರಕ್ಕೆ ಕರೆತಂದಿದ್ದಾರೆ.
ಇದು ಇತ್ತೀಚಿನ ದಿನಗಳಲ್ಲಿ ಮಂಗಳೂರು ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಾಗಿದೆ. ಬಂಧಿತ ಗಾಂಜಾ ಕಿಂಗ್ ಪಿನ್ ಸಲೀಂ ಬಾಷಾನನ್ನು ಕೂಲಂಕಷ ವಿಚಾರಣೆ ನಡೆಸಿದಾಗ ಆತ ಮಂಗಳೂರಿನ ಜಬ್ಬಾರ್, ಅಝೀಝ್ ಹಾಗೂ ನವೀನ್ ಎಂಬವರಿಗೆ ಗಾಂಜಾ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
Click this button or press Ctrl+G to toggle between Kannada and English