[1]ಬೆಂಗಳೂರು : ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮೊದಲು ಅಪರಾಧ ಪ್ರಕರಣಗಳ ಸಭೆ ಮಾಡಲಿ ಆನಂತರ ಕರ್ನಾಟಕದ ವಿರುದ್ಧ ಮಾತನಾಡಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಅಪರಾಧಗಳ ರಾಜ್ಯ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಅವರು 13 ವರ್ಷ ಗುಜರಾತ್ನಲ್ಲಿ ಮುಖ್ಯಮಂತ್ರಿಯಾಗಿದ್ದರು. ಗೋಧ್ರಾ ದುರಂತದಲ್ಲಿ ಕರಸೇವಕರು ಸುಟ್ಟು ಕರಕಲಾದರು. ಆಗ ಮೋದಿ ಅವರಿಗೆ ಜವಾಬ್ದಾರಿ ಇರಲಿಲ್ಲವೇ ಎಂದು ಪ್ರಶ್ನಿಸಿದರು.
ಗುಜರಾತ್ನಲ್ಲಿ ಎಷ್ಟು ಅಪರಾಧಗಳು ನಡೆಯುತ್ತಿದ್ದವು. ಆಗ ಮೋದಿ ಇಂಟಲಿಜೆನ್ಸ್ ಕೆಲಸ ಮಾಡುತ್ತಿರಲಿಲ್ಲವೇ? ಎಂದು ಕಿಡಿಕಾರಿದರು. ಇದೇ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಉಪಚುನಾವಣೆಯ ಸೋಲಿನಿಂದಾಗಿ ಹತಾಶೆಯಿಂದ ಮೋದಿ ಮಾತನಾಡುತ್ತಿದ್ದು, ಕಮೀಷನ್ ಸರ್ಕಾರ ಎಂದು ಹೇಳಿಕೆ ನೀಡುತ್ತಿದ್ದಾರೆ. ದಾಖಲೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಸಹ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಬಹುದು. ಆದರೆ ದಾಖಲೆ ಇಲ್ಲದೆ ವೃಥಾ ಆರೋಪ ಮಾಡಬಾರದು. ಒಬ್ಬ ಪ್ರಧಾನಿಯಾದ ಇವರು ಹೀಗೇಕೆ ಮಾತನಾಡುತ್ತಾರೆ. ಅದು ಸರಿಯೇ ಎಂದು ವಾಗ್ದಾಳಿ ನಡೆಸಿದರು.