[1]ಮಂಗಳೂರು : ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಯವರನ್ನು ಜಾತೀಯ ಕಾರಣದಿಂದ ಅರ್ಚಕ ರೊಬ್ಬರು ಪ್ರಸಾದ ನೀಡದೆ ಅವಮಾನ ಮಡಿದ ಘಟನೆ ಕಾರ್ಕಳ ಸಮೀಪದ ಮುಂಡ್ಕೂರು ಎಂಬಲ್ಲಿ ನಡೆದಿದೆ.
ಕಾರ್ಕಳ ಸಮೀಪದ ಮುಂಡ್ಕೂರು ದೇವಸ್ಥಾನದಲ್ಲಿ ಕೇಮಾರು ಶ್ರೀಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಶನೇಶ್ವರನ ಪೂಜೆ ನಡೆದುಕೊಂಡು ಬರುತ್ತಿದೆ. ಈ ವರ್ಷವೂ ಸಚ್ಚರಿಪೇಟೆಯ ಸಾರ್ವಜನಿಕ ಶನೇಶ್ವರನ ಪೂಜಾ ಸೇವಾ ಟ್ರಸ್ಟ್, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಶ್ರಯದಲ್ಲಿ ಹದಿನಾಲ್ಕನೇ ವರ್ಷದ ಶನೇಶ್ವರನ ಪೂಜಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಧಾರ್ಮಿಕ ಪ್ರವಚನಕ್ಕೆ ಬಂದ ಶಿರೂರು ಸ್ವಾಮೀಜಿ ಹಾಗೂ ಕೇಮಾರು ಸ್ವಾಮೀಜಿಯವರನ್ನು ಪ್ರಸಾದ ಸ್ವೀಕರಿಸಲು ಮಂಟಪದ ಬಳಿ ಕರೆತಂದರು. ದೇವಳದ ಅರ್ಚಕರೋರ್ವರು ಶಿರೂರು ಶ್ರೀಗಳ ಪಾದಪೂಜೆ ನೆರವೇರಿಸಿ ಅವರಿಗೆ ಗೌರವಪೂರ್ವಕವಾಗಿ ಪ್ರಸಾದವನ್ನೂ ನೀಡಿದರು. ಆದರೆ, ಅವರ ಜೊತೆಗಿದ್ದ ಕೇಮಾರುಶ್ರೀಯವರಿಗೆ ಪ್ರಸಾದ ನೀಡದೆ ಅವಮಾನ ಎಸಗಿದ್ದಾರೆ. ಇದು ಸಂಘಟಕರನ್ನು ಕೆರಳಿಸಿದೆ ಮಾತ್ರವಲ್ಲ ಸಂಘಟಕರೇ ಸ್ವಾಮೀಜಿಯವರಿಗೆ ಪ್ರಸಾದ ನೀಡಿ ಎಂದಾಗಲೂ ಅರ್ಚಕರು ಉದಾಸೀನ ತೋರಿದ್ದಾರೆ. ಪದೇ ಪದೇ ಹೇಳಿದಾಗ ಅಸ್ಪೃಶ್ಯರಂತೆ ಅವರ ಕೈಗೆ ಹೂವಿನ ಪ್ರಸಾದವನ್ನು ಎಸೆದಿದ್ದಾರೆ ಎನ್ನಲಾಗಿದೆ.
ಕೇಮಾರುಶ್ರೀಯವರ ಪೂರ್ವಶ್ರಮದ ಜಾತಿಯನ್ನಾಧರಿಸಿ ದೇವಳದ ಅರ್ಚಕ ನಡೆಸಿದ ಜಾತಿ ತಾರತಮ್ಯಕ್ಕೆ ಸಂಘಟಕರು ಮಾತ್ರವಲ್ಲ ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ.
ಇದೇ ಸಂದರ್ಭದಲ್ಲಿ ಪ್ರವಚನ ನೀಡಿದ ಕೇಮಾರುಶ್ರೀ, `ಅರ್ಚಕರು ಭಕ್ತರಿಗೆ ಪ್ರಸಾದಗಳನ್ನು ಎಸೆಯುವ ಪರಿಪಾಠ ನಿಲ್ಲಬೇಕು. ದೇವರು ಹಾಗೂ ದೇವಳದ ಮೇಲಿನ ಶ್ರದ್ಧೆ, ಭಕ್ತಿಯಿಂದ ಬರುವ ಭಕ್ತರಿಗೆ ಇದರಿಂದ ಅನ್ಯಾಯವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಅಸ್ಪೃಶ್ಯತೆ ಕಾರಣಕ್ಕಾಗಿ ಇಂದು ಸಾವಿರಾರು ಮಂದಿ ಮತಾಂತರವಾಗುತ್ತಿರುವ ಪ್ರಕ್ರೀಯೆ ನಡೆಯುತ್ತಿರುವಾಗ ಇಂತಹ ಘಟನೆಗಳು ಧರ್ಮದ ಮೇಲಿನ ನಂಬಿಕೆಗೆ ಕೊಡಲಿ ಏಟು ನೀಡುತ್ತಿದೆ. ಮತಾಂತರವನ್ನು ತಪ್ಪಿಸಬೇಕೆಂದು ಭೋಧನೆ ಮಾತ್ರ ನಡೆಯುತ್ತಿದ್ದು ಧರ್ಮದೊಳಗಿನ ಈ ರೀತಿಯ ತಾರತಮ್ಯ ಮತಾಂತರಕ್ಕೆ ಪ್ರೇರಣೆ ನೀಡುತ್ತಿದೆ. ಸ್ವಾಮೀಜಿಗಳಿಗೆ ಈ ರೀತಿ ಆಗಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾನ್ಯ ಜನರನ್ನು ಜಾತಿಯ ಕಾರಣದಿಂದ ಅಸ್ಪೃಶ್ಯತೆಯಿಂದ ಕಾಣುವುದು ಇಂದು ಕೂಡ ಮುಂದುವರಿದೆ ಇದೆ. ಆದರೆ ಸ್ವಾಮೀಜಿಗಳಿಗೂ ಇಂತಹ ಕೆಟ್ಟ ಅನುಭವವಾಗಿರುವುದು ಬುದ್ದಿವಂತರ ಜಿಲ್ಲೆ ದ.ಕ ಜಿಲ್ಲೆಯ ಸ್ವಾಮೀಜಿ ಯೊಬ್ಬರಿಗೆ.