[1]ಮಂಗಳೂರು: ಈಗಾಗಲೇ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಯಶಸ್ವಿ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೀಗ ರಾಜ್ಯ ಕರಾವಳಿಯಲ್ಲೂ ಪ್ರಚಾರ ಕೈಗೊಳ್ಳುವ ದಿನ ನಿಗದಿಯಾಗಿದೆ.
ಮಾರ್ಚ್ 20 ಹಾಗೂ 21ರಂದು ರಾಹುಲ್ ಗಾಂಧಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರದಲ್ಲಿ ಪ್ರಚಾರ ನಡೆಸಲಿದ್ದಾರೆ. ಮಂಗಳೂರಿನ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಲು ಉದ್ದೇಶಿಸಿದೆ. ಪಕ್ಷದ ಪ್ರಮುಖರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮಾರ್ಚ್ 20ರಂದು ಕರಾವಳಿ ಜಿಲ್ಲೆಗೆ ಆಗಮಿಸಿ ರಾಹುಲ್ ಗಾಂಧಿ ಮಂಗಳೂರಿನಲ್ಲಿಯೇ ತಂಗಲಿದ್ದಾರೆ. ಅಲ್ಲಿಂದ ಉಡುಪಿ ಹಾಗೂ ಕಾರವಾರಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ರೋಡ್ ಶೋ ನಡೆಸಲಿದ್ದಾರೆ. ರಾಹುಲ್ ಪ್ರವಾಸಕ್ಕೆ ವಿಶೇಷ ಬಸ್ಅನ್ನು ಕೂಡಾ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರವಾಸದ ವೇಳೆ ರಾಹುಲ್ ದೇವಸ್ಥಾನ, ಚರ್ಚ್, ಮಸೀದಿಗಳಿಗೂ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿಯಿದ್ದು, ಇನ್ನೆರಡು ದಿನಗಳಲ್ಲಿ ಅವರ ಭೇಟಿಯ ಪೂರ್ಣ ವೇಳಾಪಟ್ಟಿ ತಯಾರಾಗಲಿದೆ.