[1]ಬೆಂಗಳೂರು: ರೈತರ ಸಂಪೂರ್ಣ ಸಾಲ ಮನ್ನಾದ ಬಗ್ಗೆ ನಿಯೋಜಿತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೊಂದಲದ ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಪಿಎಂ ಹೆಚ್.ಡಿ.ದೇವೇಗೌಡ ನೀಡಿರುವ ಹೇಳಿಕೆ ರೈತರ ಸಾಲ ಮನ್ನಾ ಕನಸನ್ನು ಭಗ್ನಗೊಳಿಸುವಂತಿದೆ. ಕೇವಲ 37 ಶಾಸಕರನ್ನು ಇಟ್ಟುಕೊಂಡು ಸಾಲ ಮನ್ನಾ ಸಾಧ್ಯವೇ ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.
ಪದ್ಮಾನಾಭನಗರ ನಿವಾಸದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡಲು ನಮಗೆ ಪೂರ್ಣ ಬಹುಮತ ಸಿಕ್ಕಿದೆಯಾ? 37 ಜನರನ್ನ ಇಟ್ಟುಕೊಂಡು ಸಾಲ ಮನ್ನಾ ಮಾಡಲು ಆಗುತ್ತಾ? ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಮಾಡಬೇಕಷ್ಟೆ ಎಂದು ದೇವೇಗೌಡರು ಕೈಚೆಲ್ಲಿದ್ದಾರೆ. ನಾನು ಜೆಡಿಎಸ್ ಪಕ್ಷದ ಅಧ್ಯಕ್ಷ ಎಂಬುವುದಕ್ಕಿಂತ ಹೆಚ್ಚಾಗಿ ತಂದೆ -ತಾಯಿಗಳಾಗಿ ಅರ್ಶಿವಾದ ಮಾಡುತ್ತಿದ್ದೇವೆ. ಇದು ತಂದೆ-ತಾಯಿಗಳಾದ ನಮ್ಮ ಕರ್ತವ್ಯ, ಸಮ್ಮಿಶ್ರ ಸರ್ಕಾರದಲ್ಲಿ ಬಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಬೇಕು.
ಮಾಜಿ ಸಿಎಂ ಸಿದ್ದರಾಮಯ್ಯ ಸಮನ್ವಯ ಸಮಿತಿಯಲ್ಲಿ ಇದ್ದಾರೆ. ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿ ಎಂದು ನಿಯೋಜಿತ ಸಿಎಂ ಕುಮಾರಸ್ವಾಮಿಗೆ ದೇವೇಗೌಡ್ರು ಇದೇ ವೇಳೆ ಸಲಹೆ ನೀಡಿದರು. ಇಂದು ಸಂಜೆ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಬಂದಿದ್ದಾರೆ. ತೃತೀಯ ರಂಗದ ಬಗ್ಗೆ ಈಗಲೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು.