[1]ಬೆಂಗಳೂರು: ಮಾತಿಗೆ ತಪ್ಪಿ, ರೈತರಿಗೆ ದ್ರೋಹ ಮಾಡಿದ ಬಜೆಟ್ ಇದಾಗಿದೆ. ಇದು ಅಣ್ಣ-ತಮ್ಮಂದಿರ ಬಜೆಟ್ ಆಗಿದೆ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
34ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಆದರೆ, ಅದಕ್ಕಾಗಿ ಹಣಕಾಸು ವ್ಯವಸ್ಥೆ ಎಲ್ಲಿಂದ ಮಾಡಿದ್ದಾರೆ. ಅದರ ಬಗ್ಗೆ ಸಿಎಂ ಸ್ಪಷ್ಟೀಕರಣ ನೀಡಬೇಕು. ಸಿಎಂ ಕುಮಾರಸ್ವಾಮಿ ನಂಬಿಕೆ ದ್ರೋಹದ ಬಜೆಟ್ ನೀಡಿದ್ದಾರೆ ಎಂದು ಕಿಡಿಕಾರಿದರು.
ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಹಚ್ಚಿಸುವ ಮೂಲಕ ಜನರ ಮೇಲೆ ಹೊರೆ ಹಾಕಿದ್ದಾರೆ. ಆ ಮೂಲಕ ಡೊಂಬರಾಟ ಬಜೆಟ್ ಕೊಟ್ಟಿದ್ದಾರೆ. ಈ ರೀತಿ ದರ ಏರಿಕೆಯಿಂದ ಜನ ಬದುಕೋದು ಹೇಗೆ ಎಂದು ಪ್ರಶ್ನಿಸಿದರು.
ಕರಾವಳಿ, ಉ.ಕರ್ನಾಟಕ, ಮಲೆನಾಡಿಗೆ ಅನ್ಯಾಯವಾಗಿದೆ. ಕೇವಲ ಮಂಡ್ಯ, ಹಾಸನಕ್ಕೆ ಸೀಮಿತವಾದ ಬಜೆಟ್ ಇದಾಗಿದೆ. ಇದಕ್ಕಾಗಿ ನಿಮ್ಮನ್ನು ಸಿಎಂ ಮಾಡಿದರಾ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಬಗ್ಗೆ ಸದನದಲ್ಲಿ ಚರ್ಚೆ ಆಗುತ್ತದೆ. ಜುಲೈ 12ರ ಬಳಿಕ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ರಾಜ್ಯದ ರೈತರ ಸಮುದಾಯಕ್ಕೆ ನಾನು ಮನವಿ ಮಾಡುತ್ತೇನೆ ಈ ಬಜೆಟ್ ನೋಡಿ ಮೋಸ ಹೋಗಬೇಡಿ. ಈ ವಿಚಾರದ ಬಗ್ಗೆ ಸದನದ ಒಳಗಡೆ ಮತ್ತು ಹೊರಗಡೆ ಹೋರಾಟ ಮಾಡಲಿದ್ದೇವೆ ಎಂದು ಗುಡುಗಿದರು.