[1]ಮಂಗಳೂರು: ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿ ಸೆ. 3 ರಂದು ನಡೆಯುವ ಧರ್ಮ ಸಂಸದ್ಗೆ ಪೂರ್ವ ತಯಾರಿ ಭರದಿಂದ ಸಾಗುತ್ತಿದೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಪ್ರವಾಸವನ್ನು ಕೈಗೊಳ್ಳಲಾಗಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಸೆ . 2 ರಂದು ಹಿಮಾಲಯ ಹಾಗೂ ಭಾರತದ ವಿವಿಧ ಭಾಗಗಳಿಂದ ಸಾಧು-ಸಂತರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಸೆ. 3 ರಂದು ಬೆಳಗ್ಗೆ 7 ರಿಂದ ಶ್ರೀ ರಾಮ ತಾರಕ ಮಂತ್ರ ಯಜ್ಞ, ಹಿಮಾಲಯದ ಸಾಧು-ಸಂತರ ಶೋಭಾಯಾತ್ರೆ ಹಾಗೂ ಸ್ವಾಮೀಜಿಯವರ 10ನೇ ವರ್ಷದ ಪಟ್ಟಾಭಿಷೇಕ ಪೀಠಾರೋಹಣ, ಧರ್ಮ ಸಂಸದ್ನ ಉದ್ಘಾಟನೆ ಜರಗಲಿದೆ.
ಪೇಜಾವರ ಶ್ರೀ, ಡಾ. ಡಿ. ವಿರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ , ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶ್ರೀ ಕ್ಷೇತ್ರ ಕನ್ಯಾಡಿಯ ಟ್ರಸ್ಟಿಗಳಾದ ಮೋಹನ್ ಉಜ್ಜೋಡಿ, ಚಿತ್ತರಂಜನ್ ಗರೋಡಿ, ರೋಹಿತ್ ಪೂಜಾರಿ, ತುಕರಾಮ್, ಕೃಷ್ಣಪ್ಪ ಗುಡಿಗಾರ್, ಧರ್ಮ ಸಂಸದ್ ಸಮಿತಿಯ ಸಂಚಾಲಕ ಸತ್ಯಜಿತ್ ಸುರತ್ಕಲ್, ಸಂತ ಒಕ್ಕೂಟ ಸಮಿತಿಯ ಸಂಚಾಲಕ ಪ್ರವೀಣ್ ವಾಲ್ಕೆ, ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ, ಸೋಶಿಯಲ್ ಮೀಡಿಯಾ ಪ್ರಧಾನ ಸಂಚಾಲಕ ಕಿರಣ್ ಕುಮಾರ್ , ರವಿ ಪೂಜಾರಿ ಚಿಲಿಂಬಿ ಉಪಸ್ಥಿತರಿದ್ದರು.