[1]ಮಡಿಕೇರಿ: ಕಾಫಿ ತೋಟಕ್ಕೆ ಅಳವಡಿಸಿದ ಸೋಲಾರ್ ಬೇಲಿಗೆ ಸಿಲುಕಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆ ಸಮೀಪದ ಕಾಡ್ನೂರು ಗ್ರಾಮದಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದ ಜನರು ಕಾಡಾನೆಗಳ ದಾಳಿಯಿಂದ ಬೇಸತ್ತಿದ್ದರು. ಇದರಿಂದ ಮುಕ್ತಿ ಹೊಂದಲೂ ಗ್ರಾಮದ ಜನರು ತಮ್ಮ ಮನೆ ಮತ್ತು ತೋಟದ ಸುತ್ತಮುತ್ತ ಸೋಲಾರ್ ಬೇಲಿ ಅಳವಡಿಸಿ ಬೆಳೆ ರಕ್ಷಣೆ ಮಾಡುತ್ತಿದ್ದರು. ಆದರೆ ಕಳೆದ ರಾತ್ರಿ ಆನೆಯೊಂದು ಆಹಾರ ಅರಸಿ ಬಂದಿತ್ತು. ಅಂದಾಜು 30 ವರ್ಷ ವಯಸ್ಸಿನ ಹೆಣ್ಣಾನೆಯ ಸೊಂಡಿಲು ಹೈವೋಲ್ಟೇಜ್ ಸೋಲಾರ್ ತಂತಿಗೆ ತಗುಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ.
ಈ ಘಟನೆ ಸಂಭವಿಸುತ್ತಿದ್ದಂತೆ ಗ್ರಾಮದ ಜನರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.