[1]ಬೆಂಗಳೂರು: ಕಾರುಗಳನ್ನು ಬಾಡಿಗೆಗೆ ನೀಡುವ ಜೂಮ್ ಸಂಸ್ಥೆಗೆ ನಕಲಿ ದಾಖಲೆಗಳನ್ನು ನೀಡಿ, ಕಾರು ಪಡೆದ ವ್ಯಕ್ತಿಯೋರ್ವ ಕಾರು ಸಮೇತ ಪರಾರಿಯಾಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಪ್ರಕರಣದ ಬೆನ್ನತ್ತಿದ್ದ ಅಶೋಕನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ನೂತನ್ ಕುಮಾರ್ ಎಂಬಾತ ಅಶೋಕ ನಗರದ ಜೂಮ್ ಸಂಸ್ಥೆಯಿಂದ ಐ 20 ಕಾರನ್ನು ಬಾಡಿಗೆಗೆ ಪಡೆದಿದ್ದ. ದಾಖಲೆಗಳನ್ನು ನೀಡುವಾಗ ಸಾಯಿಕುಮಾರ್ ಎಂಬ ಹೆಸರಿನ ನಕಲಿ ದಾಖಲೆಗಳನ್ನು ನೀಡಿದ್ದ ಎಂದು ಆರೋಪಿಸಲಾಗಿದೆ.
ಮೂಲತಃ ಆಂಧ್ರದ ಕಕಾಕಿನಾಡ ನಿವಾಸಿಯಾಗಿದ್ದ ಈತ ಕಾರಿನೊಂದಿಗೆ ಪರಾರಿಯಾಗುವ ಪ್ಲಾನ್ ಮಾಡಿದ್ದ. ಬೆಂಗಳೂರನಿಂದ ಆಂಧ್ರ ಪ್ರದೇಶದ ಕಡೆಗೆ ಪರಾರಿಯಾಗುತ್ತಿದ್ದ ಈತ ಮಾರ್ಗ ಮಧ್ಯದಲ್ಲಿ ಕಾರಿನಲ್ಲಿದ್ದ ಜಿಪಿಎಸ್ ಅನ್ನು ಕಿತ್ತು ಹಾಕಿದ್ದ. ಜಿಪಿಎಸ್ ಸಂಪರ್ಕ ಸ್ಥಗಿತಗೊಳ್ಳುತ್ತಲೇ ಜೂಮ್ ಸಂಸ್ಥೆ ಸಿಬ್ಬಂದಿ ಮಹೇಶ್ಗೆ ಫೋನ್ ಮಾಡಿದ್ದರು. ಆ ನಂತರ ಫೋನ್ ಸಂಪರ್ಕಕ್ಕೆ ಸಿಗದಂತೆ ಮಾಡಿಕೊಂಡಿದ್ದ. ಆಂಧ್ರದ ಕಾಕಿನಾಡಕ್ಕೆ ಹೋಗಿದ್ದ ಮಹೇಶ್ ಕಾರಿನ ನಂಬರ್ ಪ್ಲೇಟ್ ಸಹ ಬದಲಿಸಿದ್ದ ಎನ್ನಲಾಗಿದೆ.
ಈ ಸಂಬಂಧ ಜೂಮ್ ಸಂಸ್ಥೆಯವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿ ಮಹೇಶ್ ನೂತನ್ ಕುಮಾರ್ನನ್ನು ಆಂಧ್ರದಿಂದ ಬಂಧಿಸಿ ಕರೆತಂದಿದ್ದಾರೆ. ಆರೋಪಿ ಬಳಿಯಿದ್ದ ಐ 20 ಕಾರನ್ನು ವಶಪಡಿಸಿಕೊಂಡಿದ್ದಾರೆ.