ಬೆಳ್ತಂಗಡಿ: ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಕೆದ್ದಲಿಕೆಯಲ್ಲಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ಕುಕ್ಕಳ ಗ್ರಾಮದ ನಿವಾಸಿ ಚಿನ್ನಸ್ವಾಮಿ(70) ಬಂಧಿತ ಆರೋಪಿ. ಬಂಧಿತನಿಂದ 15 ಜಿಲೆಟಿನ್ ಕಡ್ಡಿ, 99 ಡಿಟೋನೇಟರ್ ಮತ್ತು ಇವುಗಳನ್ನು ಸಾಗಿಸಲು ಉಪಯೋಗಿಸಿದ ಹೊಂಡಾ ಆ್ಯಕ್ಟಿವಾ ಸಹಿತ ಒಟ್ಟು 1,05,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸಿಐಬಿ ಪೊಲೀಸರು ರೌಂಡ್ಸ್ನಲ್ಲಿದ್ದ ಸಂದರ್ಭ ನೆಲ್ಲಿಗುಡ್ಡೆಯಿಂದ ಪುಂಜಾಲಕಟ್ಟೆ ಕಡೆಗೆ KA-21, S-9835 ಸಂಖ್ಯೆಯಹೋಂಡಾ ಆ್ಯಕ್ಟಿವಾದಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಸಾಗಿಸುತ್ತಿರುವುದಾಗಿ ಮಾಹಿತಿ ಬಂದಿತ್ತು. ಆಗ ಕಾರ್ಯಪ್ರವೃತ್ತರಾದ ಪೊಲೀಸರು ಕೆದ್ದಳಿಕೆ ಸ.ಹಿ.ಪ್ರಾ ಶಾಲೆಯ ಬಳಿ ವಾಹನವನ್ನು ನಿಲ್ಲಿಸಿದಾಗ ಅದರಲ್ಲಿ ಅಕ್ರಮ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸುನೀಲ್ ವೈ ನಾಯಕ್, ಸಿಬ್ಬಂದಿ ನಾರಾಯಣ, ವಾಸು ನಾಯ್ಕ, ಲಕ್ಷ್ಮಣ ಕೆ.ಜಿ, ಇಕ್ಬಾಲ್, ಉದಯ ಗೌಡ, ಉದಯ ರೈ, ಪ್ರವೀಣ್ ಎಂ, ತಾರಾನಾಥ್ ಎಸ್, ಶೋನ್ ಶಾ, ಸುರೇಶ್ ಕುಮಾರ್ ಭಾಗವಹಿಸಿದ್ದರು.
Click this button or press Ctrl+G to toggle between Kannada and English