ಮಂಗಳೂರು: ಭಾಷೆಯನ್ನು ಕರಗತ ಮಾಡಿಕೊಂಡ ನಂತರ ಮನುಷ್ಯ ಬೇರೆ ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಿ ವ್ಯವಹರಿಸಲು ತೊಡಗಿದ. ಭಾಷೆ ಸಂವಹನೆಗೆ ಮಾತ್ರವಲ್ಲ ಅದು ಸಂಸ್ಕೃತಿಯನ್ನೂ ಪ್ರತಿಬಿಂಬಿಸುತ್ತದೆ ಎಂದು ಖ್ಯಾತ ಬರಹಗಾರ, ಸಣ್ಣ ಕತೆಗಾರ ವಸುಧೇಂದ್ರ ಹೇಳಿದರು.
ಮಂಗಳೂರು ವಿವಿಯ ಕನ್ನಡ ವಿಭಾಗ ಏರ್ಪಡಿಸಿದ ಭಾಷೆಯ ಬಗೆಗಿನ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಭಾಷೆ ಹೇಗೆ ಸಂಸ್ಕೃತಿಯ ಪ್ರತೀಕವಾಗುತ್ತದೆ ಎಂದು ತಮ್ಮ ಎವರೆಸ್ಟ್ ಕೃತಿ ಅನುವಾದ ಮಾಡುವಾಗಿನ ಅನುಭವವನ್ನು ವಿವರಿಸಿದರು.
ಹಿಮಾಲಯ ಪರ್ವತಗಳಂತಹ ಎತ್ತರದ ಪರ್ವತಗಳಿಗೆ 4,000 ಮೀ. ಎತ್ತರಕ್ಕೆ ಹತ್ತಿದ ನಂತರ ಗಾಳಿಯಲ್ಲಿ ಆಮ್ಲಜನಕ ಕಡಿಮೆಯಾಗುತ್ತದೆ. ತುಂಬಾ ಉಸಿರುಗಟ್ಟುತ್ತದೆ. ಜೀರ್ಣ ಶಕ್ತಿ ಇರುವುದಿಲ್ಲ. ಸಾವು ಬದುಕಿನ ಪ್ರಶ್ನೆ ಎದುರಾಗುತ್ತದೆ. ಈ ಗಾಳಿಗೆ ಇಂಗ್ಲಿಷ್ನಲ್ಲಿ ಥಿನ್ ಏರ್ (Thin Air) ಎನ್ನುತ್ತಾರೆ. ನೇಪಾಳಿ ಭಾಷೆಯಲ್ಲಿ ಇದಕ್ಕೆ ಪದಗಳಿವೆ, ಟಿಬೇಟಿಯನ್ ಭಾಷೆಯಲ್ಲಿ ಇದಕ್ಕೆ ಪದಗಳಿವೆ. ಆದರೆ ಕನ್ನಡದಲ್ಲಿ ಪದಗಳಿಲ್ಲ. ಏಕೆಂದರೆ ನಮ್ಮಲ್ಲಿರುವ ಪರ್ವತಗಳು 2,000 ಅಡಿಗಿಂತ ಹೆಚ್ಚು ಎತ್ತರವಿಲ್ಲ. ಹಾಗಾಗಿ ಕನ್ನಡ ಜನಾಂಗ ಈ ಪದ ಸೃಷ್ಟಿ ಮಾಡುವ ಗೋಜಿಗೆ ಹೋಗಿಲ್ಲ. ಹಾಗಾಗಿ ಭಾಷೆ ಜನಜೀವನದ ಸಂಸ್ಕೃತಿಯ ಜೊತೆಗೆ ಥಳುಕು ಹಾಕಿಕೊಂಡಿದೆ ಎಂದು ತಿಳಿದು ಬರುತ್ತದೆ. ಹಾಗಾಗಿ ಭಾಷೆ ಶಬ್ದ ಮತ್ತು ಅರ್ಥಕ್ಕೆ ಮೀರಿ ಅರ್ಥ ಮತ್ತು ಸಂಸ್ಕೃತಿಯ ಜೊತೆಗೆ ಬೆರೆತುಹೋಗಿದೆ ಎಂದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು, ಡಾ.ರತ್ನಾವತಿ, ಡಾ.ರಾಜಲಕ್ಷ್ಮಿ, ಡಾ.ಲತಾ ಎ.ಪಂಡಿತ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English