ಮಧ್ಯಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಕಮಲನಾಥ್ ಪ್ರಮಾಣವಚನ ಸ್ವೀಕಾರ

3:27 PM, Monday, December 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

kamalnathಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಧ್ವಜ ನೆಟ್ಟು, ಗೆಲುವಿನ ನಗೆ ಬೀರಿದ ಕಮಲನಾಥ್ ಅವರು ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನ್ಯಾಷನಲ್ ಕಾನ್ಫರೆನ್ಸ್ನ ಅಧ್ಯಕ್ಷ ಫರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಮಲ್ಲಿಕಾರ್ಜು ಖರ್ಗೆ, ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ , ಜೆಡಿಯು ನಿರ್ಮಿತ ನಾಯಕ ಶರದ್ ಯಾದವ್, ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಡಿಸಿಎಂ ಸಚಿನ್ ಪೈಲಟ್, ನವಜೋತ್ ಸಿಂಗ್ ಸಿಧು, ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಸೇರಿದಂತೆ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ಸಿಂಗ್ ಚೌಹಾಣ್ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದು, ಇತರ ಮಾಜಿ ಸಿಎಂಗಳಿಗೆ ಮಾದರಿಯಾದರು. ಖುಷಿಯಿಂದಲೇ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇನ್ನು ಬಹುತೇಕ ಪ್ರತಿಪಕ್ಷಗಳು ನಾಯಕರು ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು, ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧೆಯ ಸಂದೇಶ ರವಾನಿಸಿದಂತಿತ್ತು.

ಕಮಲನಾಥ್ ಗಾಂಧಿ ಕುಟುಂಬಕ್ಕೆ ಪರಮಾಪ್ತರು. ಕಾಂಗ್ರೆಸ್ ವಲಯದಲ್ಲಿ ಇವರನ್ನು ಇಂದಿರಾಗಾಂಧಿ ಅವರ ಮೂರನೇ ಮಗ ಎಂದೇ ಕರೆಯಲಾಗುತ್ತದೆ. ಈ ಬಗ್ಗೆ ಸ್ವತಃ ಇಂದಿರಾ ಅವರೇ ಹೇಳಿಕೊಂಡಿದ್ದರು. ರಾಜಕೀಯವಾಗಿ ಇಂದಿರಾಗೆ ಇವರು ಸಾಕಷ್ಟು ಸಹಾಯ ಮಾಡಿದ್ದರು.

ಕಾನ್ಪುರದಲ್ಲಿ 1946ರಲ್ಲಿ ಜನಿಸಿದ ಕಮಲನಾಥ್ ಉದ್ಯಮಿ ಕುಟುಂಬದವರು. ಡೂನ್ ಶಾಲೆಯಲ್ಲಿ ಶಿಕ್ಷಣ ಪೂರೈಸಿದರು. ನಂತರ ಗಾಂಧಿ ಕುಟುಂಬದ ಸಂಪರ್ಕಕ್ಕೆ ಬಂದು, 1980ರಲ್ಲಿ ಮೊದಲು ಲೋಕಸಭೆಗೆ ಆಯ್ಕೆಯಾದರು. ಇವರನ್ನೂ ಒಳಗೊಂಡು 7 ಜನರ ಯುವ ಸಂಸದರ ಗುಂಪನ್ನು ಸಂಜಯ್ ಗಾಂಧಿ ಹುಡುಗರು ಎಂದೇ ಕರೆಯಲಾಗುತ್ತಿತ್ತು. ಅಲ್ಲದೆ, ಇಂದಿರಾ ಬಗ್ಗೆ ಇವರ ಸ್ವಾಮಿನಿಷ್ಠೆ ಎಷ್ಟರಮಟ್ಟಿಗಿತ್ತು ಎಂದರೆ, ಅವರು ಜೈಲು ಸೇರಿದಾಗ ಕಮಲನಾಥ್ ಸಹ ಜೈಲಿಗೆ ತೆರಳಿದರು. ಅಲ್ಲದೆ, ಸಂಜಯ್ ಜೈಲಿಗೆ ತೆರಳುವಾಗ ಕಾಂಗ್ರೆಸ್ ಜವಾಬ್ದಾರಿಯನ್ನು ಕಮಲ್ಗೆ ವಹಿಸಿದ್ದರು.

2008ರಲ್ಲಿ ಎಕನಾಮಿಕ್ಸ್ ಟೈಮ್ಸ್ನಿಂದ ಇವರಿಗೆ ವರ್ಷದ ಉದ್ಯಮ ಸುಧಾರಕ ಎಂಬ ಬಿರುದು ನೀಡಲಾಗಿತ್ತು. ಈ ಚುನಾವಣೆಯಲ್ಲಿ ರಣತಂತ್ರ ರೂಪಿಸಿದ್ದ ಕಮಲನಾಥ್ ಹಿಂದುತ್ವ ಧೋರಣೆಯನ್ನು ಮುಂದೊಡ್ಡಿ ಮತಬೇಟೆಯಾಡಿದರು. ತಾವು ಅಧಿಕಾರಕ್ಕೆ ಬಂದರೆ 23 ಸಾವಿರ ಗ್ರಾ.ಪಂ.ಗಳಲ್ಲಿ ಗೋಶಾಲೆಗಳನ್ನು ತೆರೆಯುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಚಿಂದ್ವಾರದಲ್ಲಿ ದೇಶದ ಅತಿ ಎತ್ತರದ ಹನುಮನ ಮೂರ್ತಿಯನ್ನು ಇವರು ನಿರ್ಮಿಸಿದ್ದಾರೆ. ರಾಜಕೀಯ ರಂಗದಲ್ಲಿ ಹಲವು ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಇವರು, ಮಹತ್ವದ ಸುಧಾರಣೆಗಳನ್ನು ತಂದು ಜನಪ್ರಿಯರಾಗಿದ್ದಾರೆ. 1992ರಲ್ಲಿ ರಿಯೋ ಡಿ ಜನೈರೋದ ಅರ್ತ್ ಸಮ್ಮಿತ್ನಲ್ಲಿ ರೈತರ ಹಕ್ಕುಗಳ ಬಗ್ಗೆ ಮಾತನಾಡಿ, ಜಗತ್ತಿನ ಗಮನ ಸೆಳೆದಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಕಮಲನಾಥ್, ಬಿಜೆಪಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English