- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದೇಶದ ನವೋದಯ ಶಾಲೆಗಳಲ್ಲಿ 5 ವರ್ಷಕ್ಕೆ 49 ವಿದ್ಯಾರ್ಥಿಗಳ ಆತ್ಮಹತ್ಯೆ… ದಲಿತ, ಬುಡಕಟ್ಟು ಮಕ್ಕಳೇ ಹೆಚ್ಚು

navodaya [1]ದೆಹಲಿ: ಗ್ರಾಮಿಣ ಭಾಗದ ಪ್ರತಿಭಾನ್ವಿತ ಮಕ್ಕಳಿಗೆಂದು ಕೇಂದ್ರ ಸರ್ಕಾರದಿಂದ ನಿರ್ಮಿಸಲಾದ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಜೆಎನ್ವಿ) ಕೇವಲ ಐದು ವರ್ಷಗಳಲ್ಲಿ ಕಾಲೇಜು ಕ್ಯಾಂಪಸ್ನಲ್ಲಿ ಸುಮಾರು 49 ಆತ್ಮಹತ್ಯೆ ಪ್ರಕರಣಗಳು ನಡೆದಿದೆ ಎಂದು ಆರ್ಟಿಐ ಮಾಹಿತಿಯೊಂದು ಹೇಳಿದೆ.

2013 ರಿಂದ 2017 ರವರೆಗೆ ನಡೆದ 49 ಆತ್ಮಹತ್ಯೆ ಪ್ರಕರಣಗಳಲ್ಲಿ ಅರ್ಧದಷ್ಟು ದಲಿತ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿರುವ ವಿದ್ಯಾರ್ಥಿಗಳೇ ಇದ್ದಾರೆ. ಇದರಲ್ಲಿ ಹೆಚ್ಚಿನವರು ಹುಡುಗರು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಇಂಗ್ಲಿಷ್ ದೈನಿಕವೊಂದು ಪಡೆದ ದಾಖಲೆಗಳಿಂದ ತಿಳಿದುಬಂದಿದೆ.

ಸರ್ಕಾರದ ಕಾಯ್ದೆ ಪ್ರಕಾರ ಈ ಶಾಲೆಗಳಲ್ಲಿ ಶೇ .75 ರಷ್ಟು ಸೀಟ್ಗಳನ್ನು ಗ್ರಾಮೀಣ ಭಾಗದ ಮಕ್ಕಳಿಗಾಗಿ ಮೀಸಲಿಡಬೇಕಾಗಿದೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳ ಪ್ರವೇಶವನ್ನು ಅರ್ಹತಾ ಪರೀಕ್ಷೆ ಮೂಲಕ ಮಾಡಲಾಗುತ್ತದೆ. ನವೋದಯ ವಿದ್ಯಾಲಯದಲ್ಲಿ 6ನೇ ತರಗತಿಯಿಂದ 12 ನೇತರಗತಿ ವರೆಗೆ ಶಿಕ್ಷಣವನ್ನು ನೀಡಲಾಗುತ್ತದೆ.

ಪ್ರಸ್ತುತ 635 ಜೆಎನ್ವಿ ಶಾಲೆಗಳಿದ್ದು, ಅದರಲ್ಲಿ ಒಟ್ಟಾರೆ 2.8 ಲಕ್ಷ ವಿದ್ಯಾರ್ಥಿಗಳು ವ್ಯಸಾಂಗ ಮಾಡುತ್ತಿದ್ದಾರೆ. ಮಾ. 31,2017 ರಲ್ಲಿ 600 ಶಾಲೆಗಳಲ್ಲಿ19 ವರ್ಷ ವಯಸ್ಸಿನ 2.53 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದರು. ಅದೇ ವರ್ಷ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ 14 ಆಗಿದ್ದು, ಇದರಿಂದ ವಿದ್ಯಾರ್ಥಿಗಳ ಆತ್ಮಹತ್ಯಾ ದರವೂ 1,00,000 ಲಕ್ಷಕ್ಕೆ ಶೇ.5.5 ರಷ್ಟು ಇದೆ. ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಳು ದಲಿತರು ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿದವರೆಂಬುದು ವಿಷಾದಕರ ಸಂಗತಿಯಾಗಿದೆ.

ವರ್ಷದಿಂದ ವರ್ಷಕ್ಕೆ ಈ ಆತ್ಯಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 2016ರಲ್ಲಿ 12 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮೊದಲ ಬಾರಿಗೆ ಎರಡು ಅಂಕಿಗಳನ್ನು ತಲುಪಿದೆ. ಒಟ್ಟಾರೆಯಾಗಿ 2013 ರಿಂದ 2017 ರವರೆಗೆ 20 ರಾಜ್ಯಗಳಲ್ಲಿ 46 ಶಾಲೆಗಳಲ್ಲಿ ಸುಮಾರು 49 ಆತ್ಮಹತ್ಯೆಗಳು ನಡೆದಿವೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಒಟ್ಟು ಅರ್ಧಕ್ಕಿಂತ ಹೆಚ್ಚು ಆತ್ಮಹತ್ಯೆಗಳು ನಡೆದಿವೆ. ಇನ್ನೂ 49 ವಿದ್ಯಾರ್ಥಿಗಳಲ್ಲಿ ಹೆಚ್ಚು ಹುಡುಗರಾಗಿದ್ದು, ಸಾವಿನಲ್ಲಿ ಹುಡುಗ ಮತ್ತು ಹುಡುಗಿಯರ ಅನುಪಾತವೂ 60:40 ಆಗಿದೆ.

9, 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನವರು ನೇಣುಹಾಕಿಕೊಂಡು, ನೀರಿನಲ್ಲಿ ಮುಳುಗಿ ಮರಣಹೊಂದಿದ್ದಾರೆ. ಉಳಿದವರು ಮೇಲಿಂದ ಬಿದ್ದು ಹಾಗೂ ರೈಲು ಹಳಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲವರು ಪ್ರೀತಿ ಸಿಕ್ಕಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೇ, ಇನ್ನೂ ಕೆಲವರು ಕುಟುಂಬದ ಸಮಸ್ಯೆ, ದೈಹಿಕ ಶಿಕ್ಷೆ ಅಥವಾ ಶಿಕ್ಷಕರಿಂದ ಅವಮಾನ, ಶೈಕ್ಷಣಿಕ ಒತ್ತಡ, ಖಿನ್ನತೆ ಮತ್ತು ಸ್ನೇಹಿತರ ನಡುವಿನ ಜಗಳವೆಂದು ತಿಳಿದು ಬಂದಿದೆ.

ಕುತೂಹಲಕಾರಿ ಸಂಗತಿ ಎಂದರೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪರೀಕ್ಷೆಗಳು ಮುಗಿದು ಎರಡು ತಿಂಗಳ ರಜೆ ಮುಗಿದ ನಂತರ ಹೆಚ್ಚಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು.