ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಮೃತ ಅಪ್ಪನ ಕೊನೆಯ ಆಸೆ ನೆರವೇರಿಸಿದ ಮಗಳು

5:52 PM, Friday, July 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

anusha bajantri ಗದಗ :  ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅಪ್ಪ ಮಗಳ ಓದಿನ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಆದರೆ ಮಗಳು ಎಸ್‌ಎಸ್‌ಎಲ್‌ಸಿ ಕೊನೆಯ ಪರೀಕ್ಷೆ ಬರೆಯುವ ದಿನವೇ ಮೃತಪಟ್ಟಿದ್ದಾರೆ.

ಅಪ್ಪನ ಆತ್ಮಕ್ಕೆ ನೋವು ಮಾಡಬಾರದು ಎನ್ನುವ ಕಾರಣಕ್ಕೆ ಮಗಳು  ಇಂದು ನಡೆದ ಎಸ್‌ಎಸ್‌ಎಲ್‌ಸಿ ಕೊನೆಯ ಪರೀಕ್ಷೆ ಬರೆದು ಬಂದಿದ್ದಾಳೆ.

ಗದಗದ ಬಿಇಒ ಕೆಳದಿಮಠ ಸಮೀಪದ  ಅನುಷಾ ಭಜಂತ್ರಿ ಎಂಬ ವಿದ್ಯಾರ್ಥಿನಿ.

ತಂದೆ ಸುರೇಶ್‌ ಎನ್ನುವವರು ಮೂತ್ರಪಿಂಡದ ಸಮಸ್ಯೆಯಿಂದ ಬೆಳಗ್ಗೆ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಮನೆಯಲ್ಲಿ ಎಲ್ಲ ರೀತಿಯ ಸಿದ್ಧತೆಯೂ ನಡೆದಿತ್ತು. ಆದರೆ ಸದಾ ತನ್ನ ಶಿಕ್ಷಣದ ಬಗ್ಗೆ ಕನಸು ಕಾಣುತ್ತಿದ್ದ ಅಪ್ಪನ ಆಸೆಯನ್ನು ಈಡೇರಿಸಲುಬಯಸಿದ ಅನುಷಾ ಪರೀಕ್ಷೆಗೆ ಹಾಜರಾಗಿ ಬಂದಿದ್ದಾಳೆ. ನಗರದ ರೆಡ್ಡಿ ಕಾಲೇಜ್‍ನಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಅನುಷಾ ಪರೀಕ್ಷೆ ಬರೆದು ಬಂದಿದ್ದಾಳೆ.

ಪರೀಕ್ಷೆ ಮುಗಿಸಿ ಬರುವವರೆಗೂ ಅಂತ್ಯಸಂಸ್ಕಾರ ನಡೆಸದಂತೆ ಹೇಳಿ ಹೋಗಿರುವ ಅನುಷಾ, ಮನೆಗೆ ಬಂದು ಅಂತಿಮ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದಾಳೆ. ಸಪ್ಲಿಮೆಂಟರಿಯಲ್ಲಿ ಪರೀಕ್ಷೆ ಬರೆಯಬಹುದು ಎಂದು ಹಲವರು ಹೇಳಿದ್ದರೂ ಅನುಷಾ ತನ್ನ ಅಪ್ಪನ ಆಸೆಯನ್ನು ಈಡೇರಿಸುವ ಸಲುವಾಗಿ ರಾಜಿ ಮಾಡಿಕೊಳ್ಳದೇ ಪರೀಕ್ಷೆಗೆ ಹೋಗಿರುವುದಾಗಿ ಅವರ ಸಂಬಂಧಿಯೊಬ್ಬರು ಹೇಳಿದ್ದಾರೆ.

ತಂದೆಯ ಸಾವಿನ ನೋವಿನ ನಡುವೆಯೂ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಬಂದ ಹಿನ್ನೆಲೆಯಲ್ಲಿ ಆಕೆಯ ಶಾಲೆಯ ಸಿಬ್ಬಂದಿ ಹಾಗೂ ಗದಗದ ಬಿಇಒ ಕೆಳದಿಮಠ ಮಾನಸಿಕ ಸ್ಥೈರ್ಯ ತುಂಬಿ ಪರೀಕ್ಷಾ ಕೊಠಡಿಗೆ ಕಳಿಸಿದ್ದಾರೆ. ಈಕೆಯ ದಿಟ್ಟತನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English