[1]ಅಕ್ಷಯ್ ಕುಮಾರ್ ಅವರ ಅಭಿನಯದ ಸಿನಿಮಾಗಳು ತಿಂಗಳಿಗೊಂದು ರಿಲೀಸ್ ಆಗುತ್ತಿವೆ. ಕಳೆದ ಎರಡು ತಿಂಗಳಲ್ಲಿ ರೌಡಿ ರಾಥೋಡ್, ಓ ಮೈಗಾಡ್ ಸಿನಿಮಾಗಳು ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ ಗೆದ್ದಿದ್ದವು. ಈಗ ಕಿಲಾಡಿ 786 ಬಂದಿದೆ. ಇಲ್ಲೂ ಅವರು ಪ್ರೇಕ್ಷಕರನ್ನು ನಗಿಸುವ, ರಂಜಿಸುವ ಕೆಲಸ ಮಾಡಿದ್ದಾರೆ. ಇಲ್ಲಿ ಅವರು ಪಂಜಾಬಿ ಡಾನ್ ಮಗನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಹೀರೊ ನ ಫ್ಯಾಮಿಲಿಗೆ ರೌಡಿಸಂ ನಂಟಿದೆ ಎಂಬ ಕಾರಣಕ್ಕೆ ವಧು ಕೊಡಲು ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ ಇಂಡಿಯಾದಲ್ಲಿ ಹೆಣ್ಣು ಸಿಗಲಿಲ್ಲ ಎಂಬ ಕಾರಣಕ್ಕೆ ಹೀರೋ ತಂದೆ, ತಾತ ಎಲ್ಲರೂ ಚೀನಾ, ಆಫ್ರಿಕಾ ಹುಡುಗಿಯರನ್ನು ಮದುವೆಯಾಗಿರುತ್ತಾರೆ. ಇದೇ ಚಿತ್ರದ ಹೊಸ ಹೈಲೇಟ್.
ಆದರೆ ನಾಯಕಿಯ ಕತೆಯೂ ಇದೇ ರೀತಿ. ತಂದೆ ತಾಟಿಯಾ ತುಕರಾಮ್ ತೆಂಡಲ್ಕೂರ್ (ಮಿಥುನ್ ಚಕ್ರವರ್ತಿ )ಗೂ ರೌಡಿಸಂ ಹಿನ್ನೆಲೆ ಇರುವುದರಿಂದ ಮಗಳಿಗೆ ಮದುವೆ ಮಾಡಿಸುವುದು ತಲೆ ನೋವಾಗುತ್ತದೆ. ಇವರಿಬ್ಬರ ನಡುವೆ ಮಾನ್ ಸುಖಲಾಲ್ (ಹಿಮೇಶ್ ರೆಶ್ಮಾನಿಯಾ) ಎಂಟ್ರಿ ಕೊಡುತ್ತಾನೆ. ಈತನಿಗೆ ಮದುವೆ ಮಾಡಿಸುವ ಕೆಲಸ. ಆದ್ರೆ ಮದುವೆ ಮಾಡಿಸುವ ಕೆಲಸ ಮಾಡಿಕೊಂಡು ಬಾ ಎಂದು ಅಪ್ಪ ಹೇಳಿ ಕಳುಹಿಸಿದರೆ ಮುದುವೆ ಮುರಿದು ಬರುತ್ತಾನೆ. ಇದರಿಂದ ಬೇಸತ್ತು ತಂದೆ ಈತನನ್ನು ಮನೆಯಿಂದ ಹೊರ ಹಾಕುತ್ತಾನೆ. ಮನೆಗೆ ಬರಬೇಕು ಅಂದ್ರೆ ಒಂದು ಜೋಡಿಗೆ ಮದುವೆ ಮಾಡಿಸಿ ಬಾ ಎಂದು ಷರತ್ತು ವಿಧಿಸಿರುತ್ತಾನೆ. ಅದರಂತೆ ಪಂಜಾಬಿ ಹುಡುಗ ತಿಹಟ್ಟಾರ್ ಸಿಂಗ್ (ಅಕ್ಷಯ್ ಕುಮಾರ್)ಗೆ ಹಾಗೂ ಗ್ಯಾಂಗ್ಸ್ಟರ್ ಕುಟುಂಬದ ಇಂದು ತೆಂಡಲ್ಕೂರ್ಗೆ (ಆಸಿನ್) ಮದುವೆ ಮಾಡಿಸಲು ಪ್ಲಾನ್ ಮಾಡುತ್ತಾನೆ. ಅವನು ಮದುವೆ ಮಾಡಿಸುತ್ತಾನೊ, ಇಲ್ಲವಾ ಎನ್ನುವುದಕಿಂತ ಆ ಕೆಲಸ ಮಾಡುವಾಗ ಪ್ರೇಕ್ಷಕರನ್ನು ರಂಜಿಸಲು ಆತ ಯಶಸ್ವಿ ಆಗಿದ್ದಾನಾ, ಇಲ್ಲವಾ ಎಂಬುದನ್ನು ತಿಳಿಯಲು ಚಿತ್ರ ನೋಡಲೇಬೇಕು.
ನಿರ್ದೇಶಕ ಆಶೀಶ್ ಮೋಹನ್ ನಗಿಸುವುದಷ್ಟೇ ಚಿತ್ರದ ಉದ್ದೇಶ, ಇದರಲ್ಲಿ ಲಾಜಿಕ್ ಹುಡುಕುವ ಅಗತ್ಯವಿಲ್ಲ ಎಂಬ ತತ್ವದಡಿ ಸಿನಿಮಾ ಮಾಡಿದ್ದಾರೆ. ಆದರೆ ಇಲ್ಲಿ ಅವರು ಪೂರ್ಣವಾಗಿ ಸಕ್ಸಸ್ ಆಗಿಲ್ಲ ಎನ್ನಿಸುತ್ತದೆ. ಲಾಜಿಕ್ ಇಲ್ಲದ ಅನೇಕ ದಶ್ಯಗಳು ಬಂದು ಹೋಗುತ್ತವೆ. ಅಕ್ಷಯ್ ಫೈಟ್ ಮಾಡುವುದಕ್ಕೂ ಮುನ್ನವೇ ಖಳ ನಾಯಕರು ಗಾಳಿಯಲ್ಲಿ ಹಾರಿ ಹೋಗುತ್ತಾರೆ. ಅವರ ಮುಂದೆ ಕಾಲು ಅಲ್ಲಾಡಿಸಿದ ತಕ್ಷಣ ಭೂಮಿ ನಡುಗುತ್ತದೆ. ಗೋಡೆಗಳು ಬಿರುಕು ಬಿಡುತ್ತವೆ. ಈ ರೀತಿಯ ಸಾಹಸ ದಶ್ಯಗಳು ತೆಲುಗು ಚಿತ್ರಗಳಲ್ಲಿ ಸಾಮಾನ್ಯ.
ಪಂಜಾಬಿ ಸಂಸ್ಕೃತಿ, ಡ್ರೆಸ್ ಟ್ರೆಂಡ್ ಇಲ್ಲಿ ಅನುಕರಣೆಯಾಗಿದೆ. ನಾಯಕ ಗ್ರೀನ್, ಪಿಂಕ್ ಡ್ರೆಸ್ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾನೆ. ಅಕ್ಷಯ್ ಎಂಥ ಪಾತ್ರ ಬೇಕಾದರೂ ಸಲೀಸಾಗಿ ಮಾಡಬಲ್ಲರು. ಅವರ ಡೈಲಾಗ್ ಡೆಲಿವರಿ ಹಾಗೂ ಆಂಗಿಕ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಬಲ್ಲರು. ಆಸಿನ್ ನಟನೆಯಲ್ಲಿ ಓಕೆ. ಚಿತ್ರದಲ್ಲಿ ಅವರು ಪಕ್ಕಾ ಮರಾಠಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್, ಡಾನ್ಸ್ನಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಮಿಥುನ್ ಚಕ್ರವರ್ತಿ ದೊಡ್ಡ ಮೀಸೆ ಅಂಟಿಸಿಕೊಂಡಿದ್ದಾರೆ. ಅದು ನಕಲಿ ಎಂದು ಗೊತ್ತಾಗಿಬಿಡುತ್ತದೆ. ಕ್ಯಾಮೆರಾಮನ್ ಅತ್ತರ್ ಸಿಂಗ್ ಪಂಜಾಬ್ ಸೊಬಗನ್ನು ಚೆನ್ನಾಗಿ ಸೆರೆಹಿಡಿದಿದ್ದಾರೆ. ರೇಶ್ಮಾನೀಯ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಅಭಿನಯದಲ್ಲಿ ಅವರು ವೀಕ್. ಹಾಡುಗಳಲ್ಲಿ ಹೊಸತನವಿಲ್ಲ. ಕಿಲಾಡಿ ಪಕ್ಕಾ ಮನರಂಜನಾ ಸೂತ್ರದಡಿಯಲ್ಲಿ ಮೂಡಿ ಬಂದಿರುವ ಸಿನಿಮಾ. ಅಕ್ಷಯ್ ಅಭಿಮಾನಕ್ಕಾಗಿ ಸಿನಿಮಾ ನೋಡಿದರೆ ನಿಮಗೆ ನಷ್ಟವಾಗದು.