ಇದೇ ಮೊದಲ ಬಾರಿಗೆ ತಾಜ್ ಮಹಲ್, ಚಾರ್ ಮಿನಾರ್,ಮೈಲಾರಿ ಖ್ಯಾತಿಯ ನಿರ್ದೇಶಕ ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಂದಾಗುತ್ತಿದ್ದಾರೆ. ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಉಪ್ಪಿ ಹೀರೋ. ನಾಯಕಿ ಇನ್ನೂ ಪಕ್ಕಾ ಆಗಿಲ್ಲ. ಮುಂದಿನ ತಿಂಗಳೇ ಮುಹೂರ್ತ. ಉಪೇಂದ್ರ ಹೋಂ ಬ್ಯಾನರ್ ಚಿತ್ರವನ್ನು ಮುಂದಕ್ಕಾಗಿ ಚಂದ್ರು ಚಿತ್ರಕ್ಕೆ ಓಕೆ ಮಾಡಿದ್ದಾರೆ. ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ‘ಬ್ರಹ್ಮ, ದಿ ಲೀಡರ್’ ಎಂದು ಹೆಸರಿಡಲಾಗಿದೆ.
ಕನ್ನಡ, ತೆಲುಗಿನಲ್ಲಿ ಚಿತ್ರ ಏಕಕಾಲಕ್ಕೆ ಸೆಟ್ಟೇರಲಿದೆಯಂತೆ. ಎರಡೂ ಭಾಷೆಗಳಿಗೆ ಹೊಂದುವ ಕಲಾವಿದರು ಚಿತ್ರದಲ್ಲಿರುತ್ತಾರೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ ಎನ್ನುತ್ತಾರೆ ಚಂದ್ರು. ಈ ಚಿತ್ರವನ್ನು ಮಂಜುನಾಥ ಬಾಬು ಅವರು ಸರಿಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. ತೆಲುಗು ಚಿತ್ರಕ್ಕೂ ಚಂದ್ರು ಅವರೇ ಸಾರಥ್ಯ ವಹಿಸುತ್ತಿದ್ದಾರೆ. ಸದ್ಯಕ್ಕೆ ಅವರ ಚಾರ್ ಮಿನಾರ್ ಚಿತ್ರವೂ ತೆಲುಗಿನಲ್ಲಿ ಮೂಡಿಬರುತ್ತಿದೆ. ‘ಬ್ರಹ್ಮ’ ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗದ ಆಯ್ಕೆ ಇನ್ನಷ್ಟೇ ಆಗಬೇಕು. ಆದರೆ ಕಥೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.