[1]ಮಂಗಳೂರು: ಮಂಗಳೂರು ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ರವೀಂದ್ರ ಕೆ. ಗಡಾದಿ ರವರಿಗೆ ನಕಲಿ ಸಿ.ಡಿ ತಯಾರಿ ಮತ್ತು ಮಾರಾಟ ಮಾಡುತ್ತಿರುವ ಬಗ್ಗೆ ಮುಂಬಯಿಯ ಯುನಿವರ್ಸಲ್ ಕಾಪಿರೈಟ್ ಪ್ರೊಟೆಕ್ಷನ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಮುಖೇಶ್ಚಂದ್ರ ಭಟ್ ರವರು ನೀಡಿದ ಖಚಿತ ಮಾಹಿತಿಯ ಮೇರೆಗೆ ತಮ್ಮ ಕಛೇರಿಯ ಸಿಬ್ಬಂದಿಗಳ ಸಹಾಯದೊಂದಿಗೆ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಇರುವ ಶಿವಂ ಮ್ಯೂಸಿಕ್ ಮತ್ತು ಲಾಲ್ಬಾಗ್ ಸಾಯಿಬೀನ್ ಕಾಂಪ್ಲೆಕ್ಸ್ನಲ್ಲಿರುವ ಸತ್ಯಂ ವಿಡಿಯೋ ಸಿಡಿ ಅಂಗಡಿಗಳಿಗೆ ದಿಢೀರ್ ದಾಳಿ ಮಾಡಿ ತಪಾಸಣೆ ಮಾಡಿದಾಗ ಸದ್ರಿ ಅಂಗಡಿಗಳ ಮಾಲಕರುಗಳಾದ ಗಣಪತಿ ಕಿಣಿ ಮತ್ತು ರಮಾನಾಥ ಕಿಣಿ ಎಂಬವರು ಜನಪ್ರಿಯ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಕನ್ನಡ, ಹಿಂದಿ, ಇಂಗ್ಲೀಷ್, ಮಳಿಯಾಳಿ, ತೆಲುಗು ಭಾಷೆಗಳ ಸಿನಿಮಾಗಳ ಮತ್ತು ಹಾಡುಗಳ ಡಿವಿಡಿ, ವಿಸಿಡಿ, ಎಂಪಿ-3 ಮತ್ತು ಡಿವಿಡಿ ಗಳನ್ನು ನಕಲಿಯಾಗಿ ತಯಾರು ಮಾಡಿ, ತಮ್ಮ ಅಂಗಡಿಯಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಅಲ್ಲದೇ ತಮ್ಮ ಅಂಗಡಿಯಲ್ಲಿ ನಿಲೀ ಚಿತ್ರಗಳ ಸಿಡಿ / ಡಿವಿಡಿ ಗಳನ್ನು ಇಟ್ಟುಕೊಂಡು ಅದನ್ನು ಗ್ರಾಹಕರಿಗೆ ಮಾರಾಟ / ಚಲಾವಣೆಗೆ ಕೊಡುತ್ತಿರುವುದು ಪತ್ತೆಯಾಗಿರುತ್ತದೆ ಎಂದು ಕಮಿಷನರ್ ಆಫ್ ಪೊಲೀಸ್ ಸೀಮಂತ್ ಕುಮಾರ್ ಸಿಂಗ್ ಅವರು ಇಂದು ಬೆಳಿಗ್ಗೆ ಅವರ ಕಛೇರಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
[2]
ಶಿವಂ ಮ್ಯೂಸಿಕ್ ಅಂಗಡಿಯಿಂದ ಇಂತಹ 2,100 ಎಂಪಿ-3 ಡಿಸ್ಕ್ ಗಳು, 2,800 ಡಿವಿಡಿಗಳು, 1350 ವಿಸಿಡಿಗಳು ರೆಕಾರ್ಡ್ ಮಾಡಿರುವ ಸಿಡಿಗಳು, ನಕಲಿ ಸಿಡಿಗಳಿಗೆ ಅಂಟಿಸಲು ಬಳಸಲು 4,000 ಪೋಸ್ಟರ್ ಗಳನ್ನು ಹಾಗೂ 64 ನೀಲಿ ಚಿತ್ರದ ಸಿಡಿ / ಡಿವಿಡಿಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಸುಮಾರು ರೂ 4,72,500/- ಆಗಿರುತ್ತದೆ. ಆರೋಪಿ ಗಣಪತಿ ಕಿಣಿಯ ವಿರುದ್ದ ಮಂ. ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
[3]
ಸತ್ಯಂ ಕ್ಯಾಸೆಟ್ ಅಂಗಡಿಯಲ್ಲಿ 1,100 ಎಂಪಿ-3 ಡಿಸ್ಕ್ ಗಳು, 1,200 ಡಿವಿಡಿಗಳು, 1250 ವಿಸಿಡಿಗಳು, 60 ಡಿವಿಡಿಗಳು ಮತ್ತು 24 ನೀಲಿ ಚಿತ್ರದ ಸಿಡಿ /ಡಿವಿಡಿಗಳನ್ನು ಅಮಾನತು ಪಡಿಸಿಕೊಂಡಿದ್ದು, ಇವುಗಳ ಮೌಲ್ಯ ರೂ 2,43,500 ಆಗಿರುತ್ತದೆ. ಆರೋಪಿ ರಮಾನಾಥ ಕಿಣಿಯ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಡಿಸಿಪಿ ಮುತ್ತುರಾಯ, ನಗರ ಎಸಿಪಿ ರವೀಂದ್ರ ಗಡಾದಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.