[1]ಮಂಗಳೂರು : ಕಾಂಗ್ರೆಸ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಬೆನ್ನಲ್ಲೆ ಇಂದು ಅವರ ಬೆಂಬಲಿಗರು ಕಾಂಗ್ರೆಸ್ ಜಿಲ್ಲಾ ಕಚೇರಿಯ ಎದುರು ಪಕ್ಷದ ಈ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮೈಕಲ್ ಲೋಬೊ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಐವನ್ ಡಿಸೋಜ ರಿಗೆ ಟಿಕೆಟ್ ನೀಡದೆ ಕೆಲವು ತಿಂಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಂಡ ಜೆ.ಆರ್ ಲೋಬೊಗೆ ನೀಡಲಾಗಿದೆ. ಇದು ಪಕ್ಷವು ಕಾರ್ಯಕರ್ತರಿಗೆ ಮಾಡಿದ ದ್ರೋಹವಾಗಿದೆ.ಅವರ ಈ ನಿರ್ಧಾರಕ್ಕೆ ಸರಿಯಾದ ಕಾರಣವನ್ನು ಕಾಂಗ್ರೆಸ್ ನಾಯಕರು ನೀಡಬೇಕೆಂದು ಅವರು ಒತ್ತಾಯಿಸಿದರು.
ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹಾಗೂ ಮಾಜಿ ಮೇಯರ್ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಮಾತನಾಡಿ, ಉದ್ಯಮಿ ರೊನಾಲ್ಡ್ ಕೊಲಾಸೊ ಅವರ ಒತ್ತಾಯಕ್ಕೆ ಮಣಿದು ಜೆ.ಆರ್.ಲೋಬೊಗೆ ಟಿಕೆಟ್ ನೀಡಲಾಗಿದೆ. ಇದರಿಂದ ತಾವು ನೊಂದಿರುವುದಾಗಿ ತಿಳಿಸಿದ. ಈ ಬಗ್ಗೆ ನಾಯಕರು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ನೆರೆದಿದ್ದ ಐವನ್ ಡಿಸೋಜ ರ ಬೆಂಬಲಿಗರು, ಅವರಿಗೆ ಟಿಕೆಟ್ ನೀಡುವಂತೆ ಒತಾಯಿಸಿತ್ತಾ ಇನ್ನೊಂದೆಡೆ ರೊನಾಲ್ಡ್ ಕೊಲಾಸೊ ವಿರುದ್ದ ಘೋಷಣೆಗಳನ್ನು ಕೂಗುತ್ತಾ ತಮ್ಮ ಕೋಪ ಪ್ರದರ್ಶಿಸಿದರು. ಪ್ರತಿಭಟನೆಯ ಕೊನೆಯಲ್ಲಿ ರೊನಾಲ್ಡ್ ಕೊಲಾಸೊ ಅವರ ಪ್ರತಿಕೃತಿಯನ್ನು ದಹನ ಮಾಡಲಾಯಿತು.