[1]ಮಂಗಳೂರು : ಅನಿಯಮಿತ ಲೋಡ್ ಶೆಡ್ಡಿಂಗ್, ಹಾಗು ರೈತರ ಮೇಲೆ ಅನಗತ್ಯ ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಳ್ಳುವಂತೆ ಮತ್ತು ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸೋಮವಾರ ಕರ್ನಾಟಕ ರೈತ ಸಂಘದ ಸದಸ್ಯರು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು.
ಈ ಹಿಂದೆ ಜೋಗ್ ಜಲಪಾತದ ವಿದ್ಯುತ್ ನ್ನು ದ.ಕ. ಮತ್ತು ಉಡುಪಿ ಜಿಲ್ಲೆಗಳಿಗೆ ಪೂರೈಸಲಾಗುತಿತ್ತು. ಆದರೆ ಯು.ಪಿ.ಸಿ.ಎಲ್ ಸ್ಥಾಪನೆಯಾದ ನಂತರ ನಿರಂತರ ವಿದ್ಯುತ್ ಒದಗಿಸಲಾಗುವುದು ಎಂದು ಹೇಳಿಕೆ ನೀಡಿ. ಇದೀಗ ಯು.ಪಿ.ಸಿ.ಎಲ್.ನ ವಿದ್ಯುತ್ ನೇರ ಹಾಸನ ಹಾಗೂ ಬೆಂಗಳೂರಿಗೆ ಕಳುಹಿಸಿ ಈ ಎರಡು ಜಿಲ್ಲೆಗೆ ಅನ್ಯಾಯ ಮಾಡಲಾಗುತ್ತಿದೆ. ಇದಕ್ಕೆ ಸಮರ್ಪಕ ಉತ್ತರವನ್ನು ಮೆಸ್ಕಾಂ ಆಡಳಿತ ನಿರ್ದೇಶಕ ಸುಮಂತ್ ನೀಡುವಂತೆ ಅವರು ಒತ್ತಾಯಿಸಿದರು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಮೆಸ್ಕಾಂ ಕಚೇರಿಯ ಬಳಿ ಜತೆ ಸೇರಿದ ಪ್ರತಿಭಟನಾಕಾರರು ಮೆಸ್ಕಾಂ ವಿರುದ್ದ ಹಾಗೂ ಮೆಸ್ಕಾಂನ ಆಡಳಿತ ನಿರ್ದೇಶಕರ ವಿರುದ್ದ ಘೋಷಣೆಗಳನ್ನ್ನು ಕೂಗುತ್ತಾ, ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
[2]ಪ್ರತಿಭಟನಾ ಸ್ಥಳಾಕ್ಕಾಗಮಿಸಿದ ಮೆಸ್ಕಾಂ ಆಡಳಿತ ನಿರ್ದೇಶಕ ಸುಮಂತ್ ರೊಂದಿಗೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಜಯಾನಂದ ಹೆಗ್ಡೆ ಮಾತನಾಡಿ, ಈ ಹಿಂದಿನಂತೆ ಜೋಗ್ ಜಲಪಾತದ ವಿದ್ಯುತ್ ನ್ನು ದ.ಕ. ಮತ್ತು ಉಡುಪಿ ಜಿಲ್ಲೆಗಳಿಗೆ ನೀಡಬೇಕು ಹಾಗು ಯುಪಿಸಿಎಲ್ ನ್ನು ಜಿಲ್ಲೆಯಿಂದ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು. ಅನೈಯಮಿತ ಲೋಡ್ ಶೆಡ್ಡಿಂಗ್ ನಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ ಅವರು ರೈತರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ಹಿಂತೆಗೆದುಕೊಂಡು, ಸುಳ್ಳು ಕೇಸು ದಾಖಲಿಸಿದ ಜೆಇ ಹಾಗೂ ಲೈನ್ ಮ್ಯಾನ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡರು.
[3]ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ ಸುಮಂತ್ ಹಲ್ಲೆ ಯತ್ನದ ಕೇಸು ಹಾಕಿರುವ ಜೆಇ ಹಾಗೂ ಲೈನ್ ಮ್ಯಾನ್ ಬಗ್ಗೆ 24 ಗಂಟೆಗಳೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ತಾಂತ್ರಿಕ ನಿರ್ದೇಶಕರಿಗೆ ಆದೇಶಿಸಿದರು. ವಿದ್ಯುತ್ ಸಮಸ್ಯೆ ಇರುವುದರಿಂದ ವಿದ್ಯುತ್ ನ್ನು ಕಡಿತಗೊಳಿಸಗಾಗುತ್ತಿದೆ ಆದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಕಡಿತಕ್ಕೆ ನಿರ್ಧಿಷ್ಟ ಸಮಯ ನಿಗದಿಪಡಿಸಲಾಗುದು ಎಂದು ತಿಳಿಸಿದ ಅವರು ಯುಪಿಸಿಎಲ್ ಉತ್ಪಾದಿಸುವ ಎಲ್ಲಾ ವಿದ್ಯುತ್ ನ್ನು ಎರಡು ಜಿಲ್ಲೆಗಳಿಗೆ ನೀಡುವ ಕುರಿತು ಯಾವುದೇ ಒಪ್ಪಂದವಾಗದೇ ಇರುವುದರಿಂದ ಆ ಬಗ್ಗೆ ಏನೂ ಮಾಡಲಾಗುವುದಿಲ್ಲ ಎಂದರು.