[1]ಕಾಸರಗೋಡು : ಜಿಲ್ಲೆಯಲ್ಲಿ ಗಾಂಜಾ ಸಾಗಾಣಿಕೆಯ ವಿರುದ್ದ ಪೊಲೀಸ್ ಕಾರ್ಯಾಚರಣೆ ಮುಂದುವರಿದಿದ್ದು ಬಂದ್ಯೋಡು ಬಳಿಯ ವಸತಿ ಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಅಬ್ದುಲ್ ಅಜೀಝ್ ಎಂಬಾತನನ್ನು ಬಂಧಿಸಿದ್ದಾರೆ. ಬಳಿಕ ಆತನ ನೆರೆಮನೆಯ ರಿಕ್ಷಾ ಚಾಲಕ ಅಬ್ಬಾಸ್ (35) ಎಂಬಾತನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಮನೆಯಲ್ಲಿ 3 ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಗಾಂಜಾವನ್ನು ಪತ್ತೆ ಹಚ್ಚಿ ಮನೆಯಲ್ಲಿದ್ದ ಆತನ ಪತ್ನಿ ಸೆಮೀರಾ ಯಾನೆ ಸೆಮೀಮಾ(26) ಎಂಬಾಕೆಯನ್ನು ಬಂಧಿಸಿದ್ದಾರೆ.
ಬಳಿಕ ಬಂಧಿತರು ನೀಡಿದ ಮಾಹಿತಿ ಮೇರೆಗೆ ಮಂಜೇಶ್ವರ ಸಮೀಪದ ಪಾವೂರಿನ ಅಬ್ದುಲ್ ರಹಿಮಾನ್ ಎಂಬಾತನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು 1.5 ಕ್ವಿಂಟಾಲ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕುಂಜತ್ತೂರಿನ ಮನೆಯೊಂದರಲ್ಲಿ ಶೇಖರಿಸಿಡಲಾಗಿದ್ದ ಗಾಂಜಾವನ್ನು ಎರಡು ದಿನಗಳ ಹಿಂದೆ ಪಾವೂರಿನ ಮನೆಗೆ ಕೊಂಡೊಯ್ಯಲಾಗಿತ್ತೆಂದು ಅಜೀಝ್ ಪೊಲೀಸರಲ್ಲಿ ಹೇಳಿದ್ದಾನೆ.
ಆರೋಪಿಗಳು ಅಂದ್ರಪ್ರದೇಶ, ತಮಿಳುನಾಡು ಮೊದಲಾದ ರಾಜ್ಯಗಳಿಂದ ಗಾಂಜಾವನ್ನು ತರಿಸುತ್ತಿದ್ದು ಈ ಜಾಲದ ಹಿಂದೆ ಪ್ರಭಾವಿ ವ್ಯಕ್ತಿಗಳು ಇರುವ ಸಾಧ್ಯತೆ ಇದೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ.