[1]ಬಂಟ್ವಾಳ : ಕೆಲವು ದಿನಗಳ ಹಿಂದೆ ಮಗುವಿನೊಂದಿಗೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಾಬು ಪೂಜಾರಿಯವರ ಪತ್ನಿ ಮೋಹಿನಿ ಎಂಬುವವರು ಮೈಸೂರಿನ ಲಾಡ್ಜ್ ವೊಂದರಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ವಾರಗಳ ಹಿಂದೆ ಕೈಕಂಬದ ಬೀಡಿ ಕಾರ್ಮಿಕರ ಕಚೇರಿಗೆ ಹೋಗಿ ಅಲ್ಲಿಂದ ತಲೆನೋವಿಗೆ ಔಷಧಿ ತೆಗೆದುಕೊಂಡು ಬರುತ್ತೇನೆ ಎಂದು ತನ್ನ ಮಗಳು ಮನೀಷಾಳೊಂದಿಗೆ ತೆರಳಿದ ಮೋಹಿನಿ ವಾಪಾಸು ಬಾರದೆ ನಾಪತ್ತೆಯಾಗಿದ್ದರು. ಈ ಕುರಿತು ಇವರ ಪತಿ ಬಾಬು ಪೂಜಾರಿಯವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನರೇಂದ್ರ ಎಂಬವನ ಪರಿಚಯವಿದ್ದು ಆತನೊಂದಿಗೆ ತೆರಳಿರಬೇಕೆಂದು ದೂರಿನಲ್ಲಿ ತಿಳಿಸಿದ್ದರು. ಅದರಂತೆ ಮೋಹಿನಿ ಮತ್ತು ಆಕೆಯ ಪ್ರಿಯಕರ ನರೇಂದ್ರ ಶನಿವಾರ ರಾತ್ರಿ ಮೈಸೂರಿನ ಸುದರ್ಶನ್ ಲಾಡ್ಜ್ ನಲ್ಲಿ ಈರ್ವರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಸೇವನೆಯಿಂದಾಗಿ ಮೋಹಿನಿ ಸ್ಥಳದಲ್ಲಿಯೇ ಮೃತಪಟ್ಟರೆ, ನರೇಂದ್ರನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.