[1]ಮೂಡಬಿದಿರೆ: ಮೂಡಬಿದಿರೆ ಗುರು ಬಸದಿಯ ಸಂಕೀರ್ಣದಲ್ಲಿರುವ ಸಿದ್ಧಾಂತ ಭವನದಲ್ಲಿ ಶನಿವಾರ ಕೋಟ್ಯಂತರ ರೂ. ಮೌಲ್ಯದ ವಿಗ್ರಹಗಳ ಕಳ್ಳತನ ನಡೆಸಿದ ಶಂಕಿತ ವ್ಯಕ್ತಿಯ ಕಳ್ಳನ ರೇಖಾಚಿತ್ರವನ್ನು ಜಿಲ್ಲಾ ಪೊಲೀಸ್ ಕಮಿಷನರ್ ಮನೀಶ್ ಕರ್ಬೀಕರ್ ಅವರು ಭಾನುವಾರ ಮೂಡಬಿದರೆ ಠಾಣೆಯಲ್ಲಿ ಬಿಡುಗಡೆಗೊಳಿಸಿದರು.
ಸ್ಥಳೀಯರು ನೀಡಿದ ಮಾಹಿತಿ ಮತ್ತು ದೇವಳದ ಸಿಸಿಟಿವಿ ಕ್ಯಾಮಾರಾದಲ್ಲಿದ್ದ ಚಿತ್ರದ ಆಧಾರದಲ್ಲಿ ಪೊಲೀಸರು ಕಳ್ಳನ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ. ಎರಡು ದಿನದ ಹಿಂದೆ ಬಸದಿಯ ಪರಿಸರದಲ್ಲಿ ಶಂಕಿತ ವ್ಯಕ್ತಿಯೊಬ್ಬ ತಿರುಗುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಶಂಕಿತ ವ್ಯಕ್ತಿ ಹಿಂದಿಯಲ್ಲಿ ಮಾತನಾಡುತ್ತಿದ್ದು, ಶನಿವಾರ ಬೆಳಗ್ಗೆ ರಿಕ್ಷಾ ಹತ್ತಿ ಧರ್ಮಸ್ಥಳದ ಕಡೆ ಸಾಗಿರುವ ಸಾಧ್ಯತೆಗಳಿವೆ ಎಂದು ಕರ್ಬೀಕರ್ ತಿಳಿಸಿದರು.
ಕಳ್ಳತನ ಪ್ರಕರಣವನ್ನು ಭೇದಿಸಲು ಐದು ತಂಡಗಳನ್ನು ರಚಿಸಲಾಗಿದೆ. ಚಿತ್ರವನ್ನು ಹೋಲುವ ವ್ಯಕ್ತಿಯನ್ನು ಕಂಡರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ತನಿಖೆ ನಡೆಸಲು ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.