[1]ಮಂಗಳೂರು: ದ.ಕ. ಜಿಲ್ಲಾ ಸಮಿತಿ, ಸಿಪಿಐಎಂ ಹಾಗೂ ದಲಿತ ಹಕ್ಕುಗಳ ಸಮಿತಿ ವತಿಯಿಂದ ಉಡುಪಿ ಕೃಷ್ಣ ಮಠ ಹಾಗೂ ಸರಕಾರದ ಸ್ವಾಧೀನದಲ್ಲಿರುವ ಇತರ ಸಂಸ್ಥೆಗಳಲ್ಲಿ ಮಡೆಮಡಸ್ನಾನ ಹಾಗೂ ಭೋಜನದಲ್ಲಿ ಪಂಕ್ತಿಭೇದ ನಡೆಸುವುದನ್ನು ನಿಲ್ಲಿಸ ಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಸಿಪಿಐಎಂ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ, ಮಾತನಾಡಿ ಉಡುಪಿಯ ಪೇಜಾವರ ಶ್ರೀಗಳು ಒಂದೆಡೆ ದಲಿತರ ಕೇರಿಗಳಲ್ಲಿ ಪಾದಯಾತ್ರೆ ಮಾಡುತ್ತಾರೆ ಇನ್ನೊಂದೆಡೆ ಕೃಷ್ಣ ಮಠ ದಲ್ಲೆ ಪಂಕ್ತಿಬೇಧ ಮಾಡುತ್ತಾರೆ. ಅರಕೆ ಹೊತ್ತ ಭಕ್ತರಿಗೆಂದು ನೆಲದಲ್ಲಿಯೇ ಊಟ ಹಾಕುವ ಅನಾಗರೀಕ ಮತ್ತು ಅವೈಜಾನಿಕ ಪದ್ಧತಿಯನ್ನು ಕೃಷ್ಣ ಮಠ ದಲ್ಲಿ ಆಚರಿಸಲಾಗುತ್ತದೆ ಎಂದು ಅವರು ಆರೋಪಿಸಿದರು.
ದಲಿತರ ಮೇಲೆ ಸವಾರಿ ಮಾಡುತ್ತಿರುವ ಘಟನೆಗಳು ನಿರಂತರ ಎನ್ನುವಂತೆ ನಡೆಯುತ್ತಲೇ ಇದೆ ಎಂದರು. ದಲಿತರ ಅಭಿವೃದ್ಧಿಗಾಗಿ ಸರಕಾರ ಇನ್ನಿಲ್ಲದ ಯೋಜನೆಗಳನ್ನು ತಂದರೂ ಅದನ್ನು ತಿಂದು ತೇಗುವವರೇ ಅಧಿಕವಾಗಿದ್ದಾರೆ. ನಿವೇಶನದಿಂದ ಹಿಡಿದು ವಿದ್ಯಾರ್ಥಿ ವೇತನದವರೆಗೂ ದಲಿತರಿಗೆ ಅನ್ಯಾಯವಾಗುತ್ತಲೇ ಇದೆ ಎಂದರು.
[2]ಈಗಾಗಲೇ ಹಾಸ್ಟೇಲ್ನಲ್ಲಿದ್ದು ಕಲಿಯುತ್ತಿರುವ ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು, ಆಹಾರ ಭತ್ಯೆ ಹೆಚ್ಚಿಸ ಬೇಕು ಇದಲ್ಲದೆ ದಲಿತರ ಅಭಿವೃದ್ಧಿಗೆ ಆಂಧ್ರ ಸರಕಾರ ಜಾರಿ ತಂದಿರುವ ಕಾನೂನನ್ನು ಜಾರಿ ತರಬೇಕು ಎಂದವರು ತಿಳಿಸಿದರು.
ಇದಲ್ಲದೇ ಈ ಹಿಂದೆ ನಡೆದ ಮಡೆಮಡಸ್ನಾನ ವಿರೋಧಿ ಜಾಥದಲ್ಲಿ ಭಾಗವಹಿಸಿದ್ದವರ ಮೇಲೆ ದಾಖಲಿಸಿರುವ ಸುಳ್ಳು ಕೇಸನ್ನು ಕೂಡಲೇ ಹಿಂಪಡೆ ಯಬೇಕು ಎಂದವರು ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಎಲ್ ಟಿ ಸುವರ್ಣ, ಸುನಿಲ್ ಕುಮಾರ್ ಬಜಾಲ್, ಮುನೀರ್ ಕಾಟಿಪಳ್ಳ ಮೊದಲಾದವರು ಪಾಲ್ಗೊಂಡಿದ್ದರು.