[1]ಮಂಗಳೂರು : ಹೂವಿನ ಅಂಗಡಿಯನ್ನು ಮುಚ್ಚಿದ ಬಳಿಕ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ದಂಪತಿಗಳಿಗೆ ಅತಿವೇಗದಲ್ಲಿ ಬಂದ ಟೆಂಪೋ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಮಹಿಳೆ ಮೃತಪಟ್ಟು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಪಡೀಲ್ ಜಂಕ್ಷನ್ ನಲ್ಲಿ ನಡೆದಿದೆ.
ಮೃತಮಹಿಳೆಯನ್ನು ಪಡೀಲ್ ಸಮೀಪದ ಕೋಡಕಲ್ ನ ಸಾವಿತ್ರಿ ಜೆ. ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಜವ್ರೆ ಗೌಡ(50) ಅವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಂಕನಾಡಿ ಮಾರ್ಕೆಟ್ ನ ಹೂವಿನ ಅಂಗಡಿಯನ್ನು ಮುಚ್ಚಿದ ಬಳಿಕ ರಾತ್ರಿ 10 ಗಂಟೆಯ ವೇಳೆಗೆ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. ಕಂಕನಾಡಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.