ಯುವ ನ್ಯಾಯವಾದಿ, ಕಮ್ಯೂನಿಸ್ಟ್ ಮುಖಂಡ ಸತೀಶ್ ಕುಮಾರ್ ಬಂಟ್ವಾಳ್ ನಿಧನ

10:49 AM, Sunday, July 28th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

satish bantwalಬಂಟ್ವಾಳ :  ಯುವ ನ್ಯಾಯವಾದಿ, ಕಮ್ಯೂನಿಸ್ಟ್ ಮುಖಂಡ ಸತೀಶ್ ಕುಮಾರ್ ಬಂಟ್ವಾಳ್ (35) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ನಿಧನ ಹೊಂದಿದರು.

ಕೆಲವು ದಿನಗಳ ಹಿಂದೆ ಮೆದುಳಿನ ರಕ್ತಸ್ರಾವ ಕ್ಕೆ ತುತ್ತಾಗಿದ್ದ ಸತೀಶ್ ಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.  ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮೃತರು ಎಐಟಿಯುಸಿ ಜಿಲ್ಲಾಧ್ಯಕ್ಷ ಪಿ.ಸಂಜೀವ ಅವರ ಪುತ್ರರಾಗಿದ್ದು, ತಂದೆ, ತಾಯಿ, ಪತ್ನಿ, ಮಗು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಅವರು ಪಾಣೆಮಂಗಳೂರಿನ ನೆಹರೂ ನಗರದಲ್ಲಿ ವಾಸವಾಗಿದ್ದರು.

10 ವರ್ಷಗಳಿಂದ ವಕೀಲಿ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದ ಅವರು ಬಿ.ಸಿ.ರೋಡು ಮತ್ತು ಮಂಗಳೂರಿನ ಮಣ್ಣಗುಡ್ಡ ದಲ್ಲಿ ಕಚೇರಿ ಹೊಂದಿದ್ದರು.  ಬಿ.ಸಿ.ರೋಡು, ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವಕಾಲತ್ತು ನಡೆಸಿದ್ದಾರೆ.

ಸಿಪಿಐ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದ ಇವರು ಕಾರ್ಮಿಕರ ಪರವಾದ ಹಲವಾರು ಸಂಘಟನೆಗಳ ಮೂಲಕ ಜನಪರ ಹೋರಾಟಗಳನ್ನು ಸಂಘಟಿಸಿದ್ದರು.

2009ರಲ್ಲಿ ಸಿಪಿಐ ಪಕ್ಷದಿಂದ ಬಂಟ್ವಾಳ ವಿಧಾನಸಬಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.ಇವರು ಹಲವಾರು ಕ್ರಾಂತಿಗೀತೆ, ಜಾಗೃತಿ ಗೀತೆಗಳನ್ನು ಹಾಡಿರುವುದಲ್ಲದೆ ಉತ್ತಮ ಭಾಷಣಕಾರರಾಗಿ, ಕಾನೂನು ಸಹಿತ ಸಕಾಲಿಕ ವಸ್ತು-ವಿಷಯಗಳ ಬಗ್ಗೆ ಉಪನ್ಯಾಸಕರಾಗಿದ್ದರು.

ಬಂಟ್ವಾಳ ವಕೀಲರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ, ಜೆಸಿಐ ಬಂಟ್ವಾಳ ಸದಸ್ಯರಾಗಿ ಸಹಿತ ಹಲವಾರು ಸಾಮಾಜಿಕ, ಕಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ದ.ಕ. ಜಿಲ್ಲಾ ಕಾರು ಮತ್ತು ವ್ಯಾನು ಚಾಲಕ ಮಾಲಕ ಸಂಘದ ಕಾನೂನು ಸಲಹೆಗಾರ, ಎಐಟಿಯುಸಿ ಕಾರ್ಮಿಕ ಸಂಘಟನೆಯ ಮುಖ್ಯಸ್ಥರಾಗಿದ್ದರು.

ಮೃತರ ನಿಧನಕ್ಕೆ ವಕೀಲರ ಸಂಘ ಹಾಗೂ ಜೆಸಿಐ ಬಂಟ್ವಾಳ ಸಂತಾಪ ವ್ಯಕ್ತಪಡಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English