[1]ಮಂಗಳೂರು : ದ.ಕ. ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆ ಶೀಘ್ರವಾಗಿ ನೆರವೇರಬೇಕೆಂದು ಆಗ್ರಹಿಸಿ ಸೋಮವಾರ ಮ.ನ.ಪಾ ಮುಂಭಾಗ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಅವರು, ಪ್ರತಿಭಟನೆಯನ್ನು ಉದ್ದೇಶಿಸಿ ಮೇಯರ್ ನೇಮಕ ಮಾಡದೆ ಕಾಂಗ್ರೆಸ್ ಸಂವಿಧಾನವನ್ನು ಉಲ್ಲಂಘನೆ ಮಾಡಿದೆ. ಸಂವಿಧಾನದ ಪ್ರಕಾರ ಮತದಾನವಾದ ಆರು ತಿಂಗಳೊಳಗೆ ಮೇಯರ್ ನೇಮಕಗೊಳ್ಳಬೇಕು. ಆದರೆ ಮ.ನ.ಪಾ ದಲ್ಲಿ ಪುರುಷ ಪ್ರಾಧಾನ್ಯತೆ ಹೊಂದಿರುವುದರಿಂದ ಇಲ್ಲಿ ತನಕ ಮೇಯರ್ ನೇಮಕವಾಗಿಲ್ಲ ಎಂದರು.
ಮ.ನ.ಪಾ ಯಲ್ಲಿ ಆಡಳಿತ ನಿರ್ವಹಣೆ ಮಾಡುವವರು ಇಲ್ಲದ ಕಾರಣ ಸಾರ್ವಜನಿಕರು ರಸ್ತೆ, ಕುಡಿಯುವ ನೀರು, ಬೀದಿ ದೀಪ ಹಾಗೂ ಮತ್ತಿತರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮೋನಪ್ಪ ಭಂಡಾರಿ ಹೇಳಿದರು.
ಕಾಂಗ್ರೆಸ್ ನೇತಾರರ ಬಗ್ಗೆ ಕಿಡಿಕಾರಿದ ಭಂಡಾರಿ, ಯಾವಾಗಲೂ ಮೇಯರ್ ಆಯ್ಕೆಯ ಪ್ರಸ್ತಾಪ ಬಂದರೆ ಯು.ಟಿ ಖಾದರ್ ಹಾಗೂ ರಮನಾಥ ರೈ ಅವರು ವಿನಯ್ ಕುಮಾರ್ ಸೊರಕೆ ಕಡೆ ಕೈ ತೋರಿಸಿ ತಾವು ಜಾರಿಕೊಳ್ಳುತ್ತಾರೆ ಎಂದು ಅರೋಪಿಸಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್, ಬಿಜೆಪಿ ಮುಖಂಡ ಎಸ್.ರಮೇಶ್, ಮಾಜಿ ಮೇಯರ್ ರಾಜೇಂದ್ರ ಕುಮಾರ್, ಮನಪಾ ಸದಸ್ಯರಾದ ಸುಧೀರ್ ಕಣ್ಣೂರು, ರೂಪಾ ಡಿ.ಬಂಗೇರಾ ಹಾಗೂ ಬಿಜೆಪಿಯ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.