[1]ಮಂಗಳೂರು : ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ಹ್ಯಾಮಿಲ್ಟನ್ ಕಟ್ಟಡದ ಮುಂಬಾಗದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರನ್ನು ಸಾರ್ಟ್ ಮಾಡುವಾಗ ಸಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡ ಘಟನೆ ಮಂಗಳವಾರ ಸಂಜೆ 3.30ಕ್ಕೆ ನಡೆದಿದೆ.
KA 19 N 9475 ನಂಬರಿನ ಓಮ್ನಿ ಕಾರಿನಲ್ಲಿ ಕಾರಿನ ಮಾಲಿಕ ಮಹಮ್ಮದ್ ಪೈಗಂಬರ್ ರವರು ಕಂಕನಾಡಿಯಿಂದ ಮಂಗಳೂರಿನ ಹ್ಯಾಮಿಲ್ಟನ್ ಕಟ್ಟಡದ ವಕೀಲರಲ್ಲಿಗೆ ನೋಟರಿಗಾಗಿ ಬಂದಿದ್ದರು ಕಾರಿನ ಎಲ್ ಪಿಜಿ ಮುಗಿಯುವ ಹಂತದಲ್ಲಿದ್ದುದರಿಂದ ಮೂರು ಲೀಟರ್ ಪೆಟ್ರೋಲ್ ತುಂಬಿಸಿದ್ದರು. ನೋಟರಿ ಮುಗಿಸಿ ವಾಪಾಸಾಗುವಾಗ ಅವರ ಡ್ರೈವರ್ ಕಾರನ್ನು ಸಾರ್ಟ್ ಮಾಡಿದ ತಕ್ಷಣವೇ ಕಾರಿನ ಇಂಜಿನಲ್ಲಿ ಬೆಂಕಿ ಕಾಣಿಸಿ ಕೊಂಡಿತು. ಸ್ವಲ್ಪ ಹೊತ್ತಿನಲ್ಲೇ ಬೆಂಕಿಯೊಂದಿಗೆ ಹೊಗೆಯು ಕಾಣಿಸಿ ಕೊಂಡಿತು. ಕಟ್ಟಡದಲ್ಲಿದವರು ಗ್ಯಾಸ್ ಸಿಲಿಂಡರ್ ಸ್ಫೋಟಗೊಳ್ಳಬಹುದು ಎಂದು ಹೆದರಿ ಓಡಲಾರಂಭಿಸಿದರು.
ಹ್ಯಾಮಿಲ್ಟನ್ ಕಟ್ಟಡದ ವ್ಯಾಪಾರಿಯೊಬ್ಬರು ಪಾಂಡೇಶ್ವರ ಅಗ್ನಿ ಶಾಮಕ ದಳಕ್ಕೆ ಫೋನ್ ಮಾಡಿ ಅಗ್ನಿ ಶಾಮಕ ದಳವನ್ನು ಕರೆಸಿದರು. ಅಸಿಸ್ಟೆಂಟ್ ಪೈರ್ ಸ್ಟೇಷನ್ ಆಫೀಸರ್ ಪಿ.ಸಿ. ಲಿಂಗಪ್ಪ ಮತ್ತು ಅವರ ತಂಡದವರು ಕಾರಿಗೆ ಹತ್ತಿಕೊಳ್ಳುತ್ತಿದ್ದ ಬೆಂಕಿಯನ್ನು ನಂದಿಸಿ ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದರು.
ಅಗ್ನಿ ಶಾಮಕ ವಾಹನ ಬರುವುದು ಸ್ವಲ್ಪ ತಡವಾಗುತ್ತಿದ್ದರೆ ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಳ್ಳುವ ಸಂಭವವಿತ್ತು. ಒಟ್ಟು 30ಸಾವಿರ ನಷ್ಟ ಸಂಭವಿಸಿರಬಹುದು ಎಂದು ಅಂದಾಜು ಮಾಡಲಾಗಿದೆ.
ಈ ಘಟನೆಯನ್ನು ನೋಡಲು ಹ್ಯಾಮಿಲ್ಟನ್ ಕಟ್ಟಡದ ಸುತ್ತ ಮುತ್ತ ಜನ ಸಾಗರವೇ ನೆರೆದಿತ್ತು.