ಮಂಗಳೂರು : ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖೆಯ ಸಚಿವ ಬಿ. ರಮಾನಾಥ ರೈ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಇಲ್ಲ ಎಂದು ಶುಕ್ರವಾರ ಘೋಷಿಸಿದರು.
ಸಚಿವ ಬಿ. ರಮಾನಾಥ ರೈ ಅವರು ಕನ್ನಡಪರ ಚಿಂತಕರ ಚಾವಡಿ ‘ಕನ್ನಡ ಕಟ್ಟೆ’ಯನ್ನು ಉದ್ಘಾಟಿಸಿ, ಜಿಲ್ಲೆಯ ಪರಿಸರಕ್ಕೆ ಹಾನಿಯಾಗುವ ಅಥವಾ ಜನತೆಗೆ ಬೇಡವಾದ ಯಾವ ಯೋಜನೆಗಳೂ ಇಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನೇತ್ರಾವತಿ ನದಿ ತಿರುವು ಪ್ರಸ್ತಾವನೆಯ ಬಗ್ಗೆಯೂ ಮರುಪರಿಶೀಲನೆಗೆ ಕೋರಲಾಗಿದೆ ಎಂದರು.
ಕನ್ನಡಪರ ಕಾರ್ಯವನ್ನು ಕ್ರಿಯಾಶೀಲವಾಗಿ ನಡೆಸುವಂತೆ ಪ್ರೊ| ಡಾ| ಬಿ.ಎಂ. ಹೆಗ್ಡೆ ಸಲಹೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಲೇಖಕಿ ಕ್ಯಾಥರಿನ್ ರಾಡ್ರಿಗಸ್, ನಟ ಕಾರ್ತಿಕ್, ಎ.ಸಿ. ವಿನಯರಾಜ್ ಮುಖ್ಯ ಅತಿಥಿಗಳಾಗಿದ್ದರು. ಡಾ| ಎ.ವಿ. ನಾವಡ ಆಶಯ ಭಾಷಣವಿತ್ತರು. ಮನೋಹರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಕಯ್ನಾರ ಕಿಞ್ಞಣ್ಣ ರೈ ಅವರಿಗೆ ರಾಜ್ಯದ ಅತ್ಯುನ್ನತ ಗೌರವ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಅವರ ನಿರ್ಧಾರ ಶೀಘ್ರ ಪ್ರಕಟವಾಗಲಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.