[1]ಮಂಗಳೂರು: ತಣ್ಣೀರುಬಾವಿ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಮನೆ ನಂಬ್ರ ನೀಡಲು ಒತ್ತಾಯಿಸಿ ಮ.ನ.ಪಾ ಚಲೋ ಮತ್ತು ಪ್ರತಿಭಟನಾ ಮೆರವಣಿಗೆಯು ಇಂದು ಬೆಳಿಗ್ಗೆ ಬೆಸೆಂಟ್ ಜಂಕ್ಷನ್ ನಿಂದ ಹೊರಟು ಮ.ನ.ಪಾ ಕಚೇರಿಯ ವರೆಗೆ ನಡೆಯಿತು. ಬಳಿಕ ಪ್ರತಿಭಟನಾಕಾರರು ಮ.ನ.ಪಾ ಕಚೇರಿಯ ಎದುರು ಪ್ರತಿಭಟನಾ ಪ್ರದರ್ಶನದ ನಡೆಸಿದರು.
[2]ಪ್ರತಿಭಟನೆಯನ್ನುದ್ದೇಶಿಸಿ ಲಿಂಗಪ್ಪ ನಂತೂರು, ಕಾರ್ಯದರ್ಶಿ, ದಲಿತ ಹಕ್ಕುಗಳ ಹೋರಾಟ ಸಮಿತಿ, ಮಂಗಳೂರು, ಇವರು ಮಾತನಾಡಿ ಮಂಗಳೂರು ಮಹಾನಗರ ಪಾಲಿಕೆಯ ಸುಂದರ ಕಡಲ ಕಿನಾರೆಯ ಪ್ರದೇಶವಾದ ತಣ್ಣೀರುಬಾವಿಯು ಗುರುಪುರ ನದಿ ಮತ್ತು ಅರಬ್ಬಿ ಸಮುದ್ರದ ಮಧ್ಯದ ಭೂ ಪ್ರದೇಶವಾಗಿದೆ. ಸುಮಾರು 300 ಕುಟುಂಬಗಳು ಕಳೆದ ಹಲವಾರು ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿದೆ. 98% ರಷ್ಟು ಕುಟುಂಬಗಳು ಬಡ, ದಲಿತ ಕುಟುಂಬಗಳಾಗಿವೆ, ಮೀನಿಗಾರಿಕೆ ಮತ್ತು ಬೀಡಿ ಮೊದಲಾದ ಅಲ್ಪ ಆದಾಯದಿಂದ ಬದುಕುವ ಇವರಿಗೆ ಸರಕಾರದ ಯಾವುದೇ ಜನೋಪಕಾರಿ ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳು ಲಭಿಸುತ್ತಿಲ್ಲ. ಮಹಾನಗರ ಪಾಲಿಕೆ ಮತ್ತು ಸರಕಾರದ ಜನವಿರೋಧಿ ಮಲತಾಯಿ ಧೋರಣೆಯಿಂದ ಇವರಿಗೆ ಮನೆ ನಂಬ್ರವನ್ನು ನೀಡಲಾಗಿಲ್ಲ. ಮನೆ ನಂಬ್ರ ಇಲ್ಲದಿರುವ ಏಕೈಕ ಕಾರಣಕ್ಕೆ ಸರಕಾರದ ಯಾವುದೇ ಸೌಲಭ್ಯಗಳಾಗಲೀ, ಯೋಜನೆಗಳಾಗಲೀ ಸಿಗುತ್ತಿಲ್ಲ. ರೇಷನ್ ಕಾರ್ಡ್, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ಸಾಲ ಸೌಲಭ್ಯ, ವಿಧವಾವೇತನ ಅಂಗವಿಕಲ ಮಾಸಾಸನ, ವೃಧ್ಯಾಪ್ಯ ಮಾಸಾಸನ ಇವೆಲ್ಲವುಗಳೂ ಇಲ್ಲಿನ ವಾಸಿಗಳಿಗೆ ಗಗನ ಕುಸುಮಗಳಾಗಿವೆ ಎಂದರು.
[3]ಸಿ.ಪಿ.ಐ.ಎಂ ನ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಮಾತನಾಡಿ ಸರಕಾರದಿಂದ ದೊರೆತಿರುವ ಮತದಾರರ ಗುರುತಿನ ಕಾರ್ಡ್ ಮಾತ್ರ ಅಧಿಕಾರಿಗಳ ಮತ್ತು ಭ್ರಷ್ಟ ರಾಜಕೀಯ ವ್ಯಕ್ತಿಗಳ ಸಂಚಿನ ಫಲವಾಗಿ ಯವುದೋ ಮನೆ ನಂಬ್ರವನ್ನು ನೀಡಿ ಮತದಾನದ ಹಕ್ಕನ್ನು ನೀಡಲಾಗಿದೆ. ಮ.ನ.ಪಾ ದಲಿತರ ಅಭಿವೃದ್ಧಿಗೆಂದೇ ಮೀಸಲಾಗಿರುವ 22.75% ನಿಧಿಯಲ್ಲಿ ಇಲ್ಲಿಯ ದಲಿತ ಕುಟುಂಬಗಳಿಗೆ ವಿದ್ಯಾರ್ಥಿ ವೇತನವೊಂದನ್ನು ಹೊರತು ಪಡಿಸಿ ಇತರ ಯಾವುದೇ ಸೌಲಭ್ಯಗಳನ್ನು ನೀಡದಿರುವುದು ತೀವ್ರ ಖಂಡನೀಯವಾಗಿದೆ ಎಂದರು.
[4]ಪ್ರತಿಭಟನಾ ಪ್ರದರ್ಶನದಲ್ಲಿ ಸಿ.ಪಿ.ಐ.ಎಂ ನ ಕಾಂಗ್ರೆಸ್ ಮಂಡಳಿ ಸದಸ್ಯರಾದ ವಸಂತ್ ಆಚಾರಿ, ಸಿ.ಪಿ.ಐ.ಎಂ ನ ಕಾರ್ಯದರ್ಶಿಯಾದ ಸುನೀಲ್ ಕುಮಾರ್ ಬಜಾಲ್, ಜಯಂತಿ ಶೆಟ್ಟಿ, ಮಾಧವ, ಶಮೀನ್ ಭಾನು, ಬೇಬಿ, ಜಾನ್ ಕಾಸ್ಟಲೀನ ಮೊದಲಾದವರು ಉಪಸ್ಥಿತರಿದ್ದರು.