ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮವು ನ.28 ರಿಂದ ಡಿ. 3ರವರೆಗೆ ನಡೆಯಲಿವೆ.
36ನೇ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಬೆಳ್ತಂಗಡಿ ಹೋಲಿ ರಿಡಿಮರ್ ಚರ್ಚ್ನ ಪ್ರಧಾನ ಗುರು ಫಾ.ಜೇಮ್ಸ್ ಡಿ’ ಸೋಜರವರು ಇಂದು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಧರ್ಮಾಧಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ.
ಈ ವಸ್ತು ಪ್ರದರ್ಶನ ಡಿ.3ರ ತನಕವಿದ್ದು, ಉಚಿತ ಪ್ರವೇಶವಿರುತ್ತದೆ. ಬಳಿಕ ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 6 ಗಂಟೆಯಿಂದ ಶಿವಮೊಗ್ಗದ ಮ್ಯಾಜಿಕ್ ವಿಸ್ಮಯದವರಿಂದ ಇಂದ್ರಜಾಲ, ಬಳಿಕ ವಾಮಂಜೂರು ಎಸ್ಡಿಎಂ ಮಂಗಳ ಜ್ಯೋತಿ ಸಮಗ್ರ ಶಾಲೆಯ ರಾಜ್ಯ ಪ್ರಶಸ್ತಿ ವಿಜೇತೆ ಕಸ್ತೂರಿ ಕಾಮತ್ ಇವರಿಂದ ಭಕ್ತಿ-ಭಾವ-ಜಾನಪದ ಗಾಯನ ನಡೆಯಲಿದೆ. ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ ನಡೆಯಲಿದೆ.
ಶುಕ್ರವಾರ ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 6 ಗಂಟೆಯಿಂದ ಮಂಗಳೂರಿನ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ಬಳಗದವರಿಂದ ಗಾನ ನೃತ್ಯ, ಬಳಿಕ ಪುತ್ತೂರಿನ ಡಾ. ಶೋಭಿತಾ ಸತೀಶ್ ಇವರಿಂದ ಭಕ್ತಿ- ಭಾವ ಗೀತಲಹರಿ, ನಂತರ ಉಡುಪಿ ಗೌರಿ ಶಂಕರ ಸಾಂಸ್ಕೃತಿಕ ಪ್ರತಿಷ್ಠಾನದ ಮಹಿಳೆಯರು ಮತ್ತು ಪುರುಷರು ಯಕ್ಷಗಾನವನ್ನು ನಡೆಸಿಕೊಡಲಿದ್ದಾರೆ. ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಲಿದೆ.
Click this button or press Ctrl+G to toggle between Kannada and English