[1]
ಬೆಂಗಳೂರು : ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಡಬ್ಬಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಡಾ.ರಾಜ್ ಕುಮಾರ್ ವೇದಿಕೆಯಲ್ಲಿ ಮಾತನಾಡುತ್ತಿದ್ದರು. ಡಬ್ಬಿಂಗ್ ಯಾಕೆ ಬೇಡ ಎಂಬುದನ್ನು ಅವರು ಬಹಳ ಸಂಯಮದಿಂದ ಹೇಳಿದರು. ಓವರ್ ಟು ಪುನೀತ್ ರಾಜ್ ಕುಮಾರ್…
ನಾವು ಯಾರನ್ನೂ ದ್ವೇಷಿಸುತ್ತಿಲ್ಲ. ಯಾವ ಭಾಷೆಯನ್ನೂ ದ್ವೇಷಿಸುತ್ತಿಲ್ಲ. ನಮಗೆ ಎಲ್ಲರೂ ಬೇಕು. ಏಕೆಂದರೆ ಚಿತ್ರರಂಗ ಎಂದರೆ ಒಂದು ಕುಟುಂಬ ಇದ್ದಂತೆ. ಕಲಾವಿದರು ಇಲ್ಲಿರಬಹುದು, ತಮಿಳುನಾಡಿನಲ್ಲಿರಬಹುದು ಎಲ್ಲಿ ಬೇಕಾದರೂ ಇರಬಹುದು. ಇದು ಒಂದು ಕುಟುಂಬ. ಡಬ್ಬಿಂಗ್ ಬಗ್ಗೆ ಪುನೀತ್ ರಾಜ್ ಕುಮಾರ್ ಹೇಳಿದ್ದೇನು? ಇಲ್ಲಿಂದ ಬೇರೆ ಭಾಷೆಗೆ ಹೋಗಿ ನಾವು ಪಾತ್ರ ಮಾಡ್ತೀವಿ, ಅಲ್ಲಿಂದ ಇಲ್ಲಿಗೆ ಬಂದು ಅಭಿನಯಿಸುತ್ತಾರೆ. ನಾನು ಕನ್ನಡ ಜೊತೆಗೆ ತಮಿಳು, ಮಲಯಾಳಂ, ತೆಲುಗು ಚಿತ್ರಗಳನ್ನು ನೋಡುತ್ತೇನೆ. ಅದರಿಂದ ಏನೂ ತಪ್ಪಿಲ್ಲ. ಕನ್ನಡದವರಿಗೆ ಎಲ್ಲಾ ಭಾಷೆಯೂ ಅರ್ಥವಾಗುತ್ತದೆ ಅಲ್ಲವೇ?
ಆದರೆ ಐವತ್ತಾರು ವರ್ಷಗಳಿಂದ ಇಲ್ಲದೆ ಇರುವುದು ಈ ಹೊತ್ತು ಯಾಕೆ? ಅದನನ್ನು ನಾವೇ ಕೂತುಕೊಂಡು ಪರಿಹರಿಸಿಕೊಳ್ಳಬೇಕಾಗಿತ್ತು. ಆದರೆ ಅದು ಮಿತಿಮೀರಿಬಿಟ್ಟಿದೆ. ಅದಕ್ಕಾಗಿಯೇ ನಿಮ್ಮ ಮುಂದೆ ಬಂದಿದ್ದೀವಿ. ಚಿತ್ರರಂಗಕ್ಕೆ ಡಬ್ಬಿಂಗ್ ನಿಂದ ಎಫೆಕ್ಟ್ ಆಗುತ್ತಾ ಆಗಲ್ವಾ ಎಂಬುದು ನನಗೆ ಗೊತ್ತಿಲ್ಲ.
ಆದರೆ ನಮ್ಮನ್ನು ನಂಬಿ, ಸಾರಿ ನಿಮ್ಮನ್ನು ನಂಬಿ, ನಮ್ಮನ್ನು ಯಾಕೆ ನಂಬ್ತಾರೆ ನಿಮ್ಮನ್ನು ನಂಬಿ ಸಾಕಷ್ಟು ಸಿನಿಮಾಗಳ ಕೆಲಸ ನಡೆಯುತ್ತದೆ. ಅದು ದೊಡ್ಡದಿರಬಹುದು, ಚಿಕ್ಕದಿರಬಹುದು. ವಿಶೇಷವಾಗಿ ಟಿವಿ ಮಾಧ್ಯಮದವರು. ಕಿರುತೆರೆಯಲ್ಲಿ ಸಾವಿರಾರು ಜನ ಕೆಲಸ ಮಾಡ್ತಾರೆ. ಈ ಕೆಲಸದಲ್ಲಿ ಹತ್ತು ಪರ್ಸೆಂಟ್ ಕಡಿಮೆಯಾದರೂ ಅವರ ಜೀವನ ಕಷ್ಟವಾಗುತ್ತದೆ.
ಅಷ್ಟು ಜನ ಕೆಲಸ ಕಳೆದುಕೊಳ್ಳುವುದು ಬಿಡುವುದು ನಿಮ್ಮ ಕೈಯಲ್ಲಿದೆ. ದಯವಿಟ್ಟು ನಮ್ಮ ಕೈಬಿಡಬೇಡಿ. ಇದು ಹೋರಾಟ ಅಲ್ಲ. ಬೇರೆ ಭಾಷೆ ಮೇಲೆ ನನಗೆ ಯಾವತ್ತೂ ದ್ವೇಷವಿಲ್ಲ. ಎಲ್ಲಾ ಭಾಷೆಯಲ್ಲಿ, ಎಲ್ಲಾ ಚಿತ್ರರಂಗಗಳಲ್ಲಿ ನನಗೆ ಸ್ನೇಹಿತರಿದ್ದಾರೆ. ಭಾಷೆಯ ಮೇಲೆ ಯಾವತ್ತೂ ತಪ್ಪಾಗಿ ಮಾತನಾಡಿಲ್ಲ. ನಮಗೆ ಯಾವತ್ತೂ ಸಹಾಯ, ಬೆಂಬಲ ಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮ ಸಹಾಯ ಬೇಕು”.