[1]ನವದೆಹಲಿ: ಆಮ್ ಆದ್ಮಿ ಸರ್ಕಾರ ಉರುಳಿಸಲು ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ನಿನ್ನೆಯಷ್ಟೆ ಆರೋಪಿಸಿದ್ದ ಆಮ್ ಆದ್ಮಿ ಪಕ್ಷ, ಈ ಸಂಬಂಧ ಇಂದು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ಬಿಜೆಪಿ ಸಹ ಆಪ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ದೆಹಲಿಯಲ್ಲಿ ಪ್ರತಿಭಟನೆಗಳ ಅಬ್ಬರ ಜೋರಾಗಿದೆ.
ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ಆಪ್ ಕಾರ್ಯಕರ್ತರು, ಜೇಟ್ಲಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ.
ಕೇಜ್ರಿವಾಲ್ ಸರ್ಕಾರ ಬೀಳಿಸಲು ಬಿಜೆಪಿ ನಾಯಕರಾದ ನರೇಂದ್ರ ಮೋದಿ, ಅರುಣ್ ಜೇಟ್ಲಿ ಹಾಗೂ ಹರ್ಷವರ್ಧನ್ ಅವರು 20 ಕೋಟಿ ರುಪಾಯಿ ಆಮಿಷ ಒಡ್ಡಿದ್ದಾರೆ ಎಂದು ಆಪ್ ಶಾಸಕ ಮದನ್ ಲಾಲ್ ಅವರು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಭೇಟಿಯಾಗಿದ್ದ ಮೋದಿ ಬೆಂಬಲಿಗರಿಬ್ಬರು 10 ಶಾಸಕರ ಬೆಂಬಲದೊಂದಿಗೆ ಪಕ್ಷ ಒಡೆದರೆ ಸಿಎಂ ಗದ್ದುಗೆಯಲ್ಲಿ ಕೂರಿಸುವ ಭರವಸೆ ನೀಡಿದ್ದರು ಎಂದು ಮದನ್ಲಾಲ್ ಮಾಹಿತಿ ನೀಡಿದ್ದಾರೆ. ದೆಹಲಿ ಅಸೆಂಬ್ಲಿ ಚುನಾವಣೆ ಫಲಿತಾಂಶಕ್ಕೂ ಮುನ್ನ ಡಿ.7ರ ಮಧ್ಯರಾತ್ರಿ ಕರೆ ಬಂದಿತ್ತು. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಪ್ರಮುಖ ಮುಖಂಡನೊಬ್ಬ ನಿಮ್ಮ ಬಳಿ ಮಾತನಾಡಲು ಬಯಸಿದ್ದಾರೆ ಎಂದಿದ್ದ. ಯಾರೆಂದು ಕೇಳಿದ್ದಕ್ಕೆ ಅರುಣ್ ಜೇಟ್ಲಿ ಹೆಸರು ಹೇಳಿದ್ದ. ಜೇಟ್ಲಿ ಹೆಸರು ಕೇಳುತ್ತಲೇ ನಾನು ಸಿಟ್ಟಿನಿಂದ ಕರೆ ಕಟ್ ಮಾಡಿದ್ದೆ. ಈ ವಿಚಾರವನ್ನು ಪಕ್ಷದ ಹೈಕಮಾಂಡ್ಗೂ ತಿಳಿಸಿದ್ದೇನೆ ಎಂದು ಮದನ್ಲಾಲ್ ಮಾಹಿತಿ ನೀಡಿದ್ದಾರೆ. ಆದರೆ, ಈ ಆರೋಪ ಪುಷ್ಟೀಕರಿಸುವ ಯಾವುದೇ ದಾಖಲೆ ತಮ್ಮ ಬಳಿ ಇಲ್ಲ ಎಂದು ಮದನ್ಲಾಲ್ ಸ್ಪಷ್ಟಪಡಿಸಿದ್ದಾರೆ.
ಆರೋಪ ನಿರಾಕರಿಸಿದ ಜೇಟ್ಲಿ ಆಮ್ ಆದ್ಮಿ ಪಕ್ಷದ ಆರೋಪವನ್ನು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಆಪ್ನ ಪರ್ಯಾಯ ರಾಜಕೀಯದಲ್ಲಿ ಸುಳ್ಳು ಆರೋಪ ಮಾಡುವ ಮೂಲಭೂತ ಹಕ್ಕು ಕೂಡ ಸೇರಿಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.