ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಇಂಡಿಯಾನ ಹಾಸ್ಟಿಟಲ್ ಸಹಯೋಗದಲ್ಲಿ ಪತ್ರಕರ್ತರಿಗೆ ಆಯೋಜಿಸಿರುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಇಂಡಿಯಾನ ಹಾಸ್ಪಿಟಲ್ನ ಅಧ್ಯಕ್ಷ ಡಾ.ಆಲಿ ಕುಂಬ್ಳೆ ಸೋಮವಾರ ಉದ್ಘಾಟಿಸಿದರು.
ಒತ್ತಡದ ಮಧ್ಯೆ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯ ಸುರಕ್ಷತೆ ಬಗ್ಗೆ ಗಮನ ಹರಿಸುವುದು ಅವಶ್ಯ. ಕಾಯಿಲೆ ಗುಣ ಪಡಿಸುವುದಕ್ಕಿಂತ ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು. ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಇಂಡಿಯಾನ ಆಸ್ಪತ್ರೆ ಪತ್ರಕರ್ತರಿಗೆ ಈ ಸೌಲಭ್ಯ ನೀಡುತ್ತಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವದಾಸ್ `ಇಂಡಿಯಾನ ಹಾಸ್ಟಿಟಲ್ ಬಡವರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವ ಇಂಡಿಯಾನ ಗ್ರಾಮೀಣ ಆರೋಗ್ಯ ಯೋಜನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾಧ್ಯಮ ಬಂಧುಗಳಿಗೆ ನೀಡುವ ಉಚಿತ ತಪಾಸಣೆಯ ಪ್ಯಾಕೇಜ್ ಮುಂದಿನ ಮೂರು ತಿಂಗಳವರೆಗೆ ಜಾರಿಯಲ್ಲಿರುತ್ತದೆ’ ಎಂದರು.
ಆಸ್ಪತ್ರೆಯ ಮುಖ್ಯ ನಿರ್ವಾಹಣಾಧಿಕಾರಿ ಸಮೀರ್.ಪಿ.ಟಿ., ಮಾರ್ಕೆಟಿಂಗ್ ವಿಭಾಗದ ಸಹಾಯಕ ಮೆನೇಜರ್ ಚೆಂಗಪ್ಪ.ಎ.ಡಿ. ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿ, ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ.ಆರ್.ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ಕಾರ್ಯಕ್ರಮ ನಿರೂಪಿಸಿದರು.
ಪತ್ರಕರ್ತರಿಗೆ ಆಸ್ಪತ್ರೆಯಿಂದ ಒದಗಿಸುವ `ಇಂಡಿಯಾನ 4 ಎಸ್ಟೇಟ್ ಕಾರ್ಡ್’ ಇದೇ ಸಂದರ್ಭ ಅನಾವರಣಗೊಳಿಸಲಾಯಿತು.