ಮಂಗಳೂರು : ಶೈಕ್ಷಣಿಕ ವರ್ಷ ಈಗಾಗಲೇ ಪ್ರಥಮ ಹಾಗೂ ದ್ವೀತಿಯ ವರ್ಷದ ತರಗತಿಗಳು ಆರಂಭವಾಗಿದೆ. ಆದರೂ ಇದುವರೆಗೂ ಪಠ್ಯ ಪುಸ್ತಕಗಳು ದೊರಕದೆ ವಿದ್ಯಾರ್ಥಿಗಳು, ಅಧ್ಯಾಪಕರು ಗೊಂದಲಿದಾರೆ ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಪಠ್ಯಪುಸ್ತಕ ವಿತರಿಸುವಲ್ಲಿ ಗಮನ ಹರಿಸಿ, ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರ್ಕಾರವನ್ನು ಆಗ್ರಹಿಸಿ ಮಂಗಳವಾರ ಜೂನ್ 24 ರಂದು ಪಿವಿಎಸ್ ವೃತ್ತದ ಬಳಿ ಮಾನವ ಸರಪಳಿ ನಡೆಸಿ ಪ್ರತಿಭಟನೆ ನಡೆಸಿತು.
ಕರ್ನಾಟಕ ರಾಜ್ಯದಲ್ಲಿ 9 ಲಕ್ಷಕ್ಕೂ ಹೆಚ್ಚು ಪದವಿ ಪೂರ್ವದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದ್ದಾರೆ, ಸರಿ ಸುಮಾರು 45 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ರಾಜ್ಯದ ಮಾರುಕಟ್ಟೆಗೆ ಬಂದಿರಬೇಕಿತ್ತು. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಪುಸ್ತಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಸರ್ಕಾರದ ಈ ವಿಳಂಬ ನೀತಿಯನ್ನು ಎಬಿವಿಪಿ ಖಂಡಿಸುತ್ತದೆ ಆದ್ದರಿಂದ ಸರ್ಕಾರ ತಕ್ಷಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಠ್ಯಪುಸ್ತಕ ವಿತರಿಸಿ, ವಿದ್ಯಾರ್ಥಿಗಳ ವಿಧ್ಯಾಬ್ಯಾಸಕ್ಕೆ ತೊಂದರೆಯಾಗದಂತೆ ಗಮನಹರಿಸಬೇಕೆಂದು ವಿದ್ಯಾರ್ಥಿ ಪರಿಷತ್ ನ ರಾಜ್ಯ ಸಂಚಾಲಕ ರಮೇಶ್ ಕೆ ವಿನಂತಿಸಿದರು.
ಎಬಿವಿಪಿ ಕಾರ್ಯಕರ್ತರಾದ ಯತೀಶ್ ಕುಮಾರ್, ಚೇತನ್, ಅನೂಷ್ಕಾ ಮೊದಲಾದವರು ಭಾಗವಹಿಸಿದ್ದರು.