[1]ಮಂಗಳೂರು; ದೇಶಾದ್ಯಂತ ಯುವ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳನ್ನು ಪ್ರಜಾತಂತ್ರ ವ್ಯವಸ್ಥೆಯ ಮೂಲಕ ಆರಿಸಿ ಪಕ್ಷವನ್ನು ಬಲಿಷ್ಠಗೊಳಿಸುವ ಹಾಗೂ ಪಾರದರ್ಶಕ ವ್ಯವಸ್ಥೆ ಸ್ಥಾಪಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಸಮಿತಿಗೆ ಚುನಾವಣೆಯನ್ನು ಶ್ರೀಯುತ ರಾಹುಲ್ ಗಾಂಧಿಯವರು ಚಾಲನೆ ನೀಡಿದ್ದು ಈ ಪ್ರಕ್ರಿಯೆಯನ್ನು ಈಗಾಗಲೇ ಸುಮಾರು 16 ರಾಜ್ಯಗಳಲ್ಲಿ ಪೂರ್ಣಗೊಳಿಸಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಯುವ ಕಾಂಗ್ರೆಸ್ ಸಮಿತಿಗೆ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾದ ಪ್ರಯುಕ್ತ ಮೊದಲನೆಯದಾಗಿ ಯುವ ಜನರನ್ನು ಯುವ ಕಾಂಗ್ರೆಸ್ಗೆ ಸದಸ್ಯರನ್ನಾಗಿ ನೋಂದಾಯಿಸುವ ಪ್ರಕ್ರಿಯೆ ಕರ್ನಾಟಕ ರಾಜ್ಯದ ದ.ಕ. ಜಿಲ್ಲೆಯ ಮಂಗಳೂರಿನಿಂದ ಆರಂಭಿಸಲು ಅಖಿಲ ಭಾರತ ಯುವ ಕಾಂಗ್ರೆಸ್ ಸಮಿತಿ ತೀರ್ಮಾನಿಸಿದೆ.
ಈ ಉದ್ದೇಶದಿಂದ ಬೃಹತ್ ಯುವ ಜಾಗೃತಿ ಸಮಾವೇಶವನ್ನು ಉಳ್ಳಾಲ ಕ್ಷೇತ್ರದ ತೊಕ್ಕೊಟ್ಟು ಮೈದಾನಿನಲ್ಲಿ ದಿನಾಂಕ 02-02-11 ರಂದು ಬುಧವಾರ ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅರುಣ್ ಕುವೆಲ್ಲೋ, ದ.ಕ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿಇಂದು ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಮಿತಿಯು ಯುವ ಹಾಗೂ ಸ್ಪಷ್ಟ ರಾಜಕಾರಣಕ್ಕಾಗಿ “ಬೃಹತ್ ಯುವ ಜಾಗೃತಿ ಸಮಾವೇಶ” ಮಾಡುವುದರೊಂದಿಗೆ ಯುವ ಜನರಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣದ ಅರಿವು ಮೂಡಿಸಿ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರ ಪಾತ್ರ ಮಹತ್ವದ್ದಾಗಿದ್ದು ಯುವ ಜನರು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ ಹಾಗೂ ಪ್ರಸ್ತುತ ನಮ್ಮ ದೇಶದಲ್ಲಿ ಸುಮಾರು 70 ಶೇಕಡ ಯುವಕರು ಇರುವುದರಿಂದ ಈ ಕಾರ್ಯಕ್ಕಮ ಕೈಗೊಳ್ಳಲಾಗಿದೆ ಎಂದರು.
ಈ ಸಮಾವೇಶದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರು, ಶಾಸಕರೂ ಆಗಿರುವಂತಹ ರಾಜೀವ್ ಸಾತ್ವ, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಯುವ ಕಾಂಗ್ರೆಸ್ ನ ಉಸ್ತುವಾರಿ ವಹಿಸಿಕೋಂಡಿರುವ ಜೀತೇಂದ್ರ ಸಿಂಗ್, ಕೆ.ಪಿಸಿ.ಸಿ ಅಧ್ಯಕ್ಷರಾದ ಡಾ| ಪರಮೇಶ್ವರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಶ್ರೀ ಜನಾರ್ಧನ ಪೂಜಾರಿ, ಮಾಜಿ ಕೆ.ಪಿ.ಸಿ.ಸಿ. ಕಾರ್ಯಧ್ಯಕ್ಷರಾದ ಡಿ,ಕೆ ಶಿವಕುಮಾರ್, ಸಚೇತಕ ಅಭಯಚಂದ್ರ ಜೈನ್, ರಾಜ್ಯಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಕೃಷ್ಣ ಭೈರೇಗೌಡ , ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ದಿನೇಶ್ ಗುಂಡುರಾವ್, ಜಿಲ್ಲಾ ಕಂಗ್ರೆಸ್ ಅಧ್ಯಕ್ಷರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದಿನಾಂಕ 30-01-2011 ರಂದು ಬೆಳಿಗ್ಗೆ ಸಮಯ 10 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಸಮಾವೇಶದ ಪೂರ್ವಭಾವಿಯಾಗಿ ‘ಯುವ ಸಂದೇಶ”ವನ್ನುಹೊತ್ತುಕೊಂಡು 2 ವಾಹನಗಳು ಜಿಲ್ಲೆಯಾದ್ಯಂತ ಸಂಚರಿಸಿ ಸಮಾವೇಶದ ದಿನದಂದು ತೊಕ್ಕೊಟ್ಟಿಗೆ ಬಂದು ತಲುಪಲಿದೆ ಎಂದು ಅವರು ತಿಳಿಸಿದರು.
ವಿಜಯ ಕುಮಾರ್ ಶೆಟ್ಟಿ, ಪಿ ಮೋಹನ್, ಕಲ್ಲಿಗೆ ತಾರನಾಥ ಶೆಟ್ಟಿ, ಯು.ಟಿ.ಖಾದರ್, ಎ.ಸಿ.ವಿನಯರಾಜು, ಮೊಹಮ್ಮದ್ ಬದ್ರುದ್ದೀನ್, ಐವನ್ ಡಿಸೋಜಾ, ಟಿ.ಕೆ.ಸುಧೀರ್ ಮಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.