ಮಂಗಳೂರು : ಕ್ರಿಮಿನಲ್ ಗ್ಯಾಂಗ್ ಗಳ ಮೇಲಾಟಕ್ಕೆ ಅಮಾಯಕ ರಿಕ್ಷಾ ಚಾಲಕ ರಿಫಾಯಿ ಹತ್ಯೆಗೀಡಾಗಿರುವುದು ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ರಿಕ್ಷಾ ಚಾಲಕನ ಬರ್ಬರ ಕೊಲೆಗೆ ಬಂಟ್ವಾಳ ಪೊಲೀಸರ ನಿಷ್ಕ್ರೀಯತೆ, ಕ್ರಿಮಿನಲ್ ನೊಂದಿಗಿನ ಒಡನಾಟವೇ ಕಾರಣ ಎಂದು DYFI ದ.ಕ. ಜಿಲ್ಲಾ ಸಮಿತಿ ಆಪಾದಿಸಿದೆ. ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದನ್ನು ಈ ಘಟನೆ ಎತ್ತಿ ತೋರಿಸುತ್ತದೆ ಎಂದು DYFI ಆರೋಪಿಸಿದೆ.
ಮಾರಿಪಳ್ಳ ಪರಿಸರದಲ್ಲಿ ಕಳೆದ ಒಂದೆರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಮಾದಕ ಪದಾರ್ಥಗಳ ಜಾಲ, ಕ್ರಿಮಿನಲ್ ಚಟುವಟಿಕೆಗಳನ್ನು ನಿಯಂತ್ರಿಸುವುದರಲ್ಲಿ ಪೊಲೀಸರು ತೋರಿಸಿರುವ ನಿಷ್ಕ್ರೀಯತೆ ಸರಣಿ ಹತ್ಯೆಗಳಿಗೆ ಕಾರಣವಾಗಿದೆ. ಫೆಬ್ರವರಿಯಲ್ಲಿ ಕಳ್ಳತನದ ಆರೋಪದಲ್ಲಿ ಸಾರ್ವಜನಿಕವಾಗಿ ನಡೆದ ಕೊಲೆ ಯತ್ನದ ಆರೋಪಿಗಳನ್ನು ರಾಜಕೀಯ ಪ್ರಭಾವದಿಂದ ಬಂಧಿಸದೇ ಇರುವುದು, ನೌಷದ್ ಕೊಲೆಯ ನಂತರವೂ ಸ್ಥಳೀಯ ಕ್ರಿಮಿನಲ್ ಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳದೇ ಇರುವುದು. ಇಂದು ಜನತೆ ಭಯದಿಂದ ಓಡಾಡುವ ಪರಿಸ್ಥಿತಿಗೆ ತಲುಪಿದೆ.
ದ.ಕ. ಜಿಲ್ಲೆಯಲ್ಲಿಯೂ ಕಾನೂನು ಪಾಲನೆಯಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ರಾಜೇಶ್ ಪೂಜಾರಿ ಕೊಲೆ ಪ್ರಕರಣ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಒಂಟಿ ಮಹಿಳೆಯರ ಕೊಲೆಗಳು ಸೇರಿದಂತೆ ಹಲವು ಕೊಲೆ ಪ್ರಕರಣಗಳು ಪತ್ತೆಯಾಗದೆ ಮುಚ್ಚಿ ಹೋಗಿದೆ. ಜಿಲ್ಲೆಯ ಜನರ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಲ್ಡರ್ಗಳಂತೂ ತಮಗೆ ಬರುವ ಹಫ್ತಾ ಬೆದರಿಕೆಗಳ ಬಗ್ಗೆ ಪೊಲೀಸರಿಗೆ ದೂರು ಕೊಡುವುದನ್ನೇ ಕೈಬಿಟ್ಟು, ಭೂಗತ ದೊರೆಗಳೊಂದಿಗೆ ಒಪ್ಪಂದ ಕುದುರಿಸುತ್ತಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಜಿಲ್ಲೆಯ ಮೂರ ಜನ ಮಂತ್ರಿಗಳು ತಮಗೂ ಇದಕ್ಕೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಖಂಡನೀಯ ಎಂದು DYFI ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ವೈಫಲ್ಯನ್ನು ಖಂಡಿಸಿ, ರಿಕ್ಷಾ ಚಾಲಕನ ಹತ್ಯೆಯ ಸಮಗ್ರ ತನಿಖೆಗೆ ಒತ್ತಾಯಿಸಿ, ಮೃತನ ಕುಟುಂಬಕ್ಕೆ ಪರಿಹಾರಧನಕ್ಕೆ ಆಗ್ರಹಿಸಿ ರಿಕ್ಷಾ ಚಾಲಕರು ಆಗಸ್ಟ್ 13ರಂದು ಐಜಿಪಿ ಕಚೇರಿಗೆ ನಡೆಸಲಿರುವ ಪ್ರತಿಭಟನಾ ಮೆರವಣಿಯಲ್ಲಿ ಆಙಈ ಸಂಘಟನೆಯೂ ಭಾಗವಹಿಸಲಿದೆ ಎಂದು ಮುನೀರ್ ಕಾಟಪಳ್ಳ ಸರಕಾರವನ್ನು ಎಚ್ಚರಿಸಿದ್ದಾರೆ.