- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೆಸ್ಕಾಂನ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೊಲೆ ಆರೋಪಿಗಳ ಬಂಧನ

Mescom engineer Killers [1]

ಮಂಗಳೂರು: ಬಿಜೈ ನಿವಾಸಿ ಮೆಸ್ಕಾಂನ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಗದೀಶ್ ರಾವ್(56) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಉರ್ವಾ ಠಾಣಾ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಹಿತೇಂದ್ರ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ನಿವಾಸಿ ಸಿದ್ದಪ್ಪ ಯಾನೆ ಸಿದ್ದು(22), ದಾವಣಗೆರೆಯ ನಿಟ್ಟೋಳಿ ಸೈಯದ್ ಫೀರ್ ಬಡಾವಣೆ ನಿವಾಸಿ ಮುರ್ತುಜ ಖಾದ್ರಿ ಯಾನೆ ರಫೀಕ್(27) ಎಂಬವರು ನಗರದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಉರ್ವಾ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆ ವಿಚಾರ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್ ಕಮಿಷನರ್ ಹಿತೇಂದ್ರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ ಒಂದರಂದು ಉರ್ವಾ ಠಾಣಾ ವ್ಯಾಪ್ತಿಯ ಅಳಕೆ ಎಂಬಲ್ಲಿ ಸುಶೀಲಾ(75) ಎಂಬ ವೃದ್ಧೆಯನ್ನು ಕತ್ತು ಸೀಳಿ ಕೊಲೆಗೈಯಲಾಗಿತ್ತು. ಪೊಲೀಸರು ತನಿಖೆ ನಡೆಸುತ್ತಿರುವಂತೆಯೇ ಸೆ.20ರಂದು ಕದ್ರಿಯ ಮೆಸ್ಕಾಂ ಆಫೀಸರ್ ಜಗದೀಶ್ ರಾವ್ ಅವರನ್ನು ಮನೆಯಲ್ಲೇ ಕತ್ತು ಸೀಳಿ ಕೊಲೆಗೈಯಲಾಗಿತ್ತು. ಹೀಗಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.

ಇವರಿಬ್ಬರೂ ನಗರದಲ್ಲಿ ಹಲವಾರು ಕಳ್ಳತನ ಹಾಗೂ ಒಂದು ಶಸ್ತ್ರಾಸ್ತ್ರ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಕಮಿಷನರ್ ಹಿತೇಂದ್ರ ತಿಳಿಸಿದ್ದಾರೆ.

ಬಂಧಿತರಿಂದ ಚಿನ್ನದ ಸರ, ರಿವಾಲ್ವರ್, 16 ರೌಂಡ್ಸ್, ಐದು ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಫೈನಾನ್ಸ್ ಸಂಸ್ಥೆಗಳಲ್ಲಿ ಅಡವಿರಿಸಿರುವ ಚಿನ್ನಾಭರಣ ವಶಪಡಿಸಿಕೊಳ್ಳಲು ಬಾಕಿಯಿದೆ ಎಂದು ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.

Mescom Killers [2]